ಅಂಗನಾಮಣಿ ಮನ ಮೋಹಿನಿ


ನದಿಯೊಂದು ಜಲಪಾತವಾಗಿ ಧುಮ್ಮಿಕ್ಕಿದರೆ ಅದು ರೋಮ ಹರ್ಷಕ ಅನುಭವವೀಯುವ ಅಬ್ಬರ. ಅದೇ ನದಿ ಹಸಿರ ಕಣಿವೆಯ ಕೊರಕಲಿನಲ್ಲಿ ಪ್ರವಹಿಸಿದರೆ ಅದೊಂದು ದೃಶ್ಯ ವೈಭವ. ಯಾವುದೋ ತಿರುವಿನಲ್ಲಿ ತೊರೆಯ ಒಡಲು ಬರಿದಾದರೆ ರಸಭಂಗವಾದಂತೆ.

ರಂಗಸ್ಥಳದಲ್ಲೂ ಹಾಗೆಯೇ. ಪಾತ್ರವೊಂದು ಮೊಳಕೆಯೊಡೆದು ತುರೀಯಾವಸ್ಥೆ ತಲುಪಲು ವಿಭಿನ್ನ ರಸಘಟ್ಟ ಕ್ರಮಿಸಬೇಕಾಗುತ್ತದೆ. ಯಕ್ಷಗಾನದಭಸ್ಮಾಸುರ ಮೋಹಿನಿಆಖ್ಯಾನದ ಮೋಹಿನಿಯ ಪಾತ್ರದ ಪ್ರವೇಶ ಭೋರ್ಗರೆವ ಜಲಪಾತದಂತೆ. ಮೋಹಿನಿ ಶ್ರೀಹರಿಯ ವೇಷಾಂತರ. ಭಸ್ಮಾಸುರನನ್ನು ಮರುಳು ಮಾಡಿ ಕೊಲ್ಲುವುದೇ ಮೋಹಕ ರೂಪಿ ಮೋಹಿನಿಯ ತಂತ್ರ.

ಪ್ರಸಂಗದ ಪೂರ್ವಾರ್ಧದಲ್ಲಿ ಮೋಹಿನಿಯ ಪ್ರವೇಶವಾಗುತ್ತದೆ. ಚೆಲ್ಲು ಚೆಲ್ಲಾಗಿ ಆಡುವುದು, ಸೌಂದರ್ಯಾತಿಶಯದಿಂದ ಬೀಗುವುದೇ ಈಕೆಯ ಸ್ವಭಾವ. ಒಂದರ್ಥದಲ್ಲಿ ಶೃಂಗಾರವೇ ವಿಜೃಂಭಿಸಬೇಕು. ನರ್ತನದಲ್ಲಂತೂ ಮೈಮರೆಸಲೇಬೇಕು. ಯಕ್ಷಗಾನದಲ್ಲಿ ಪುರುಷರೇ ಸ್ತ್ರೀವೇಷ ಮಾಡುವುದು ರೂಢಿ. ಹೀಗಾಗಿ ಮೋಹಿನಿಯಾಗಿ ಮೋಡಿಗೈಯ್ಯಲು ಅಂತಹ ಪ್ರತಿಭಾಸಂಪನ್ನರೇ ಇರಬೇಕಾಗುತ್ತದೆ.

ಮಾರ್ಚ್ ೧೫ ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಹಾಸ್ಯಗಾರ ರಮೇಶ ಭಂಡಾರಿ ಸಹಾಯಾರ್ಥ ಪ್ರದರ್ಶನದಲ್ಲಿ ಆಖ್ಯಾನವಿತ್ತು. ಮೋಹಿನಿಯಾಗಿ ಅಭಿನಯಿಸಿದವರು ಮೋಹಕ ಸ್ತ್ರೀವೇಷಧಾರಿಯೇ ಆದ ಯಲಗುಪ್ಪ ಸುಬ್ರಹ್ಮಣ್ಯ. ಇವತ್ತಿನ ಸಂದರ್ಭದಲ್ಲಿ ಮೋಹಿನಿಯಂಥ ಪಾತ್ರವನ್ನು ಯಲಗುಪ್ಪ ಮಾತ್ರ ಸಮರ್ಥವಾಗಿ ಅರಳಿಸಬಲ್ಲರು. ಅದಕ್ಕೇ ಅವರು ಅಂದಿನ ಪ್ರದರ್ಶನದ ಕೇಂದ್ರವಾಗಿದ್ದರು. ನಿರೀಕ್ಷೆಯಂತೆ ಮತ್ತೊಮ್ಮೆಮನ ಮೋಹಿನಿಯೇ ಆದರು.

ಬಂದಳಾಗ ಮೋಹಿನಿಯು ಆನಂದದಿ, ಎಲ್ಲೆಲ್ಲು ಸೊಬಗಿದೆ... ಸೇರಿ ಎಲ್ಲ ಪದ್ಯಗಳಿಗೂ ಕುಣಿದು ದಣಿದು ಸಮ್ಮೋಹನಗೊಳಿಸಬಲ್ಲವರು ಯಲಗುಪ್ಪ. ಯಕ್ಷಗಾನೀಯ ವಲಯದವರಲ್ಲದವರು ಕಲಾವಿದನ ಸ್ತ್ರೀವೇಷ ಕಂಡರೆ ಹೆಣ್ಣೆಂದೇ ಭಾವಿಸುತ್ತಾರೆ. ನೈಜ ಸಂಗತಿ ಅರಿತಾಗ ಚಕಿತರಾಗಿ ಹೌದಾ.. ಎಂದು ಉದ್ಗರಿಸಿದ ಎಷ್ಟೋ ನಿದರ್ಶನಗಳಿವೆ. ದಿಗಡದಿಮ್ಮಿಯಂಥ ವೇಷದಷ್ಟೇ ಸಮರ್ಥವಾಗಿ ಭಾವ ಪ್ರಧಾನ ಪಾತ್ರಗಳಲ್ಲೂ ಗೆಲ್ಲುವ ಅರ್ಹತೆ ಯಲಗುಪ್ಪ ಅವರಿಗೆ ಉಂಟು.

ವೃತ್ತಿ ಮೇಳಕ್ಕೆ ಕಾಲಿಟ್ಟ ಹೊಸತರಲ್ಲಿ ಇದೇ ಯಲಗುಪ್ಪ ಮೇಲೆ ಭರವಸೆ ಇಟ್ಟವರು ಕಡಿಮೆ. ಆದರೆ, ಕಠಿಣ ಪರಿಶ್ರಮದಿಂದ ಹಂತಕ್ಕೆ ಬೆಳೆದರು. ಸುಬ್ರಹ್ಮಣ್ಯ ಅವರಿಗೆ ಲಯದ ಮೇಲಿನ ಅದ್ಭುತ ಹಿಡಿತದ ಸಿದ್ಧಿಯಿದೆ. ಶ್ರುತಿಬದ್ಧವಾಗಿ ಹಾಡಿಕೊಳ್ಳುವ, ಹಿಮ್ಮೇಳವನ್ನು ಹೊಂದಾಣಿಕೆ ಮಾಡಿಕೊಂಡು ಸಾಗುವ ಜಾಣ್ಮೆಯಿದೆ. ಭರತನಾಟ್ಯ, ಹಿಂದೂಸ್ತಾನಿ ಸಂಗೀತದ ಅಭ್ಯಾಸವೂ ಇದೆ. ವಾಚಿಕಾಂಗದಲ್ಲೂ ಮೇಲ್ಮೆಯಿದೆ. ಮೋಹಿನಿ, ಮೇನಕೆಯಂಥ ಪಾತ್ರಗಳಲ್ಲಿ ಶಿಲ್ಪ ಸುಂದರಿಯೇ ಆಗುತ್ತಾರೆ. ಅದಕ್ಕೆ ಸಹವರ್ತಿಯಾಗಿ ಅವರ ದೇಹ ಬಾಗುತ್ತದೆ. ಬಳುಕುತ್ತದೆ. ಹಾವ, ಭಾವ, ಒನಪು, ವೈಯ್ಯಾರದಿಂದ ಸ್ತ್ರೀ ಸಹಜ ಗುಣಲಕ್ಷಣಗಳನ್ನು ಮೈಗೂಡಿಸಿ ಅಭಿನಯಿಸುತ್ತಾರೆ. ಹದಿನಾರರ ಸೊಕ್ಕಿದ ಅಂಗನೆಯಂತೆಕೊಮಣೆಮಾಡೋದೂ ಗೊತ್ತು.

ನಮ್ಮ ಚೋಳ (ಕಂಚಿನ ಶಿಲ್ಪ), ಹೊಯ್ಸಳ ಇತ್ಯಾದಿ ಶಿಲ್ಪ ಕೃತಿಗಳಿಗೆ ಸುರೇಖಾಕೃತಿಯೆನ್ನುತ್ತೇವೆ. ಸೌಂದರ್ಯ ಶಾಸ್ತ್ರದಲ್ಲೂ ಸರ್ವಾಂಗ ಭೂಷಿತ ಸ್ತ್ರೀ ಗೆ ಇದು ಉಪಮೆ. ಸರಳ, ಲಾಲಿತ್ಯಭರಿತ ರೇಖೆ ಇರುವಂಥಾದ್ದು ತೆರನ ಆಕೃತಿ. ಅದು ಎಲ್ಲಿಯೂ ಛಿದ್ರಗೊಳ್ಳುವುದಿಲ್ಲ. ಚಿತ್ರವು ಜೀವಂತ ಬಿಂಬವಾಗಿಯೂ ( ಡಿ ಇಮೇಜ್/ರೂಪಚಿತ್ರ) ಅನುಭೂತಿಗೆ ಬರುತ್ತದೆ. ಹೀಗಿರುವುದು ಕಾವ್ಯ ಕನ್ನಿಕೆಯೇ ಮೈವೆತ್ತ ಸುರೇಖಾಕೃತಿ. ಹೆಣ್ಣುಗಳಲ್ಲೇ ಅತಿಶಯ ವಿರಳ. ಯಕ್ಷರಂಗದಲ್ಲಿ ಸಂಪನ್ನತೆಯ ಸನಿಹ ಇರುವವರು ಯಲಗುಪ್ಪ. ಇದನ್ನು ಸಾಧ್ಯವಾಗಿಸ ಹೊರಟಿರುವುದು ಕಲಾವಿದನ ವಿನೀತ ಹುಡುಕಾಟ, ಕೌಶಲ್ಯ. ನೆಲೆಯಲ್ಲಿ ಯಲಗುಪ್ಪ ಯಕ್ಷರಂಗದಮಾದರಿ ಹೆಣ್ಣಾಗುವ ಹಾದಿಯಲ್ಲಿದ್ದಾರೆ. ಎಂದೆಂದಿಗೂ ಪ್ರಸ್ತುತವಾಗುವ ಭವಿತವ್ಯ ಅವರಿಗಿದೆ.

ಬಡಗಿನ ಪ್ರತಿಭೆ ಯಲಗುಪ್ಪ ಸುಬ್ರಹ್ಮಣ್ಯ ಉಭಯ ತಿಟ್ಟಿನ ಆಕರ್ಷಣೆಯೂ ಹೌದು. ಆದರೆ, ಬಡಗುತಿಟ್ಟಿನಲ್ಲೇ ನೆಲೆ ನಿಂತರೆ ಕಲಾವಿದ ಅಪೇಕ್ಷೆಯ ಎತ್ತರಕ್ಕೆ ಏರಿ ಬೆಳಗಬಲ್ಲರು. ಇದಕ್ಕಾಗಿ ನಿರಂತರ ಚೆಂದವಾಗಿ ವೇಷ ಮಾಡಿಕೊಳ್ಳಬೇಕು. ಯಕ್ಷಗಾನೀಯ ಆಭರಣ, ವಸನದ ಆಯ್ಕೆಯಲ್ಲಿ ಹೆಚ್ಚು ಶ್ರದ್ಧೆ ವಹಿಸಬೇಕು. ಶಿರೋಭೂಷಣದಿಂದ ಪಾದದ ವರೆಗೂ ವೇಷದ ಒಪ್ಪ, ಓರಣದ ಸೊಬಗು ಮುಕ್ಕಾಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ನದಿಯ ಚಲನಶೀಲತೆಗೆ ಕುಂದುಂಟಾದಂತೆ, ರಸಜ್ಞರ ಕಣ್ಣಿನ ನೋಟಕ್ಕೆ ಪೊರೆ ಆವರಿಸಿದಂತಾಗುತ್ತದೆ.
(ವಿಜಯ ಕರ್ನಾಟಕ ಸಂಸ್ಕೃತಿ ಸಿಂಚನದಲ್ಲಿ ಪ್ರಕಟವಾದ ಲೇಖನ. ಸ್ವಲ್ಪ ಜಾಸ್ತಿ ವಿಷಯ ಸೇರಿಸಲಾಗಿದೆ)

ಶಂಕರನ ಧ್ಯಾನ

ಪ್ರಾಯಶಃ ಚೌತಿ ಹಬ್ಬದ ಸಮಯವಿರಬೇಕು. ನನಗೆ ಶಿರಸಿಯ ಸಾರ್ವಜನಿಕ ಗಣಪತಿ ನೋಡುವ ಸಂಭ್ರಮ. ಅದಕ್ಕೆಂದು ಕರೆದುಕೊಂಡು ಹೋಗಿದ್ದ ಅಪ್ಪಯ್ಯ ಒಂದು ಸುತ್ತು ಹಾಕಿಸಿ ಕೊಪ್ಪಣ್ಣನ ಖಾನಾವಳಿಯಲ್ಲಿ ಕುಳ್ಳಿರಿಸಿ ಟಿಎಸ್ಎಸ್ಗೆ ತೆರಳಿದ್ದರು. ಅಪ್ಪಯ್ಯ ವಾಪಸಾಗುವುದು ತಡವಾಗುತ್ತದೆಂದು ಭಾವಿಸಿ ದೇವಿಕೆರೆ ಏರಿ ಮೇಲೆ ತಿರುಗಾಡ ತೊಡಗಿದೆ.

ಆಗ ನಾನು ನೋಡಿದ್ದು ಸಪೂರ ಮೈಕಟ್ಟಿನ, ಸಾಧಾರಣ ಎತ್ತರದ, ಉದ್ದ ಕೂದಲಿನ ವ್ಯಕ್ತಿ. ಅವರು ನನ್ನನ್ನು ದಾಟಿ ಹೋದ ಮೇಲೆ, ‘ಓಹೋ, ಇವರು ನಮ್ಮಶಂಕರ ಭಾಗವತರುಎಂದು ತಿಳಿಯಿತು. ಓಡಿ ಹೋಗಿ ಮಾತಾಡಿಸೋಣವೆಂದು ಯೋಚಿಸುತ್ತಿರುವಾಗಲೇ ಭಾಗವತರು ಜನರ ಮಧ್ಯದಲ್ಲಿ ಮರೆಯಾದರು. ಮತ್ತೆ ಓಡಾಡುವ ಮನಸ್ಸಾಗದೆ ಖಾನಾವಳಿಗೆ ಹಿಂದಿರುಗಿ ಹೊರಗಡೆಯ ಕಾಲುಮಣೆ ಮೇಲೆ ಕುಳಿತೆ.

ಅಪ್ಪಯ್ಯ ಸೊಸೈಟಿ ಕೆಲಸ ಮುಗಿಸಿ ಬರುವ ವರೆಗೂ ಏನೋ ಚಡಪಡಿಕೆ. ರಂಗಸ್ಥಳದಲ್ಲಿ ಮದ್ದಲೆ ನುಡಿಸುವ ಶಂಕರ ಭಾಗೋತ್ರು ಇಷ್ಟು ಹತ್ತಿರದಲ್ಲಿ ಸಿಕ್ಕಿದ್ರು. ಸಾದಾ ಡ್ರೆಸ್ಸ್ನಲ್ಲೂ ಎಷ್ಟು ಚೆಂದ ಕಾಣ್ತ್ರು. ಹ್ವಾಯ್..., ಎಂದು ಕೈ ಕಲುಕಬೇಕಿತ್ತು ಎಂಬ ಭಾವ ತುಮುಲದಲ್ಲಿ ಒದ್ದಾಡುತ್ತಿದ್ದೆ. ಅಪ್ಪಯ್ಯ ಬಂದು ತಮಾ, ಮನೆಗೆ ಹೋಪನ ಬಸ್ಸ್ ಇದ್ದು... ಎಂದು ಕರೆದಾಗಲೇ ಎಚ್ಚರವಾಯ್ತು. ಶಂಕರ ಭಾಗೋತನ್ನ ನೋಡ್ದೆ. ಇಲ್ಲೇ ಎಲ್ಲೋ ಇದ್ದ. ಹೋಗಿ ಕಾಣುವ ಎಂದು ಅಪ್ಪಯ್ಯನ ಬಳಿ ಹೇಳಿದೆ.

ಅದಕ್ಕೆ ಪೋರನಿಗೆ ಆಟದ ಮೇಳದವರ ಆಕರ್ಷಣೆ ಹೆಚ್ಚಾಯ್ತು ಎಂಬಂತೆ ಅಪ್ಪಯ್ಯ ನೋಡಿದ. ಈಗ ಬೇಡ. ಮುಂದೆ ಯಾವಾಗಾದರೂ ಆಟಕ್ಕೆ ಹೋದಾಗ ಚೌಕಿಮನೆಯಲ್ಲಿ ಕಂಡರಾಯ್ತು. ಸತ್ಕಾರ ಹೋಟೆಲ್ನಲ್ಲಿ ಮಸಾಲೆ ದೋಸೆ ತಿಂದು ಹೊರಡೋಣವೆಂದು ಅನುನಯಿಸಿ ಕೈ ಹಿಡಿದುಕೊಂಡು ಹೊರಟೇ ಬಿಟ್ಟ. ನಾನು ಶಂಕರ ಭಾಗವತರ ನೆನಪಲ್ಲೇ ಹೆಜ್ಜೆ ಹಾಕಿದೆ.

ಘಟನೆ ನಡೆದಾಗ ನನಗೆ ೧೦ ರಿಂದ ೧೨ ವರ್ಷವಿರಬಹುದು. ಅದಾಗಿ ಹದಿನೈದು ವರ್ಷವೇ ಉರುಳಿದೆ. ಅವಧಿಯಲ್ಲಿ ಯಕ್ಷಗಾನ ಪ್ರದರ್ಶನ, ಶಿರಸಿ ಪೇಟೆ, ಮತ್ತೆ ಹಲವೆಡೆ ಶಂಕರ ಭಾಗವತರನ್ನು ನೋಡಿದ್ದೇನೆ. ಬೇಕಾದಷ್ಟು ಮಾತಾಡಿದ್ದೇನೆ. ಪ್ರಮುಖವಾಗಿ ಅವರು ಮದ್ದಲೆ ನುಡಿಸುವ, ಅದರಿಂದ ನಾದ ಹೊಮ್ಮಿಸುವ ಪರಿಯನ್ನು ಕಂಡು (ಕೇಳಿ) ಕ್ಷಣಕ್ಕೂ ಬೆರಗಾಗುತ್ತಿದ್ದೇನೆ.

ಕರಾವಳಿ-ಮಲೆನಾಡಿನವರಿಗೆ ಗೊತ್ತಿದೆ. ಯಕ್ಷಗಾನ, ಕಲಾವಿದರ ಬಗೆಗಿನ ಸೆಳೆತವೇ ಅಂತಹುದು ಎಂದು. ಅದೇ ವಾತಾವರಣದಲ್ಲಿ ಬೆಳದ ನನ್ನಂಥವನಿಗೆ ಇಂತಹ ಅನುಭವವಾಗುವುದು ಸಹಜವೆಂದು ಈಗ ಅರಿವಾಗುತ್ತಿದೆ.

ಅದೇನೇ ಇರಲಿ, ಪ್ರಕೃತ ನಮ್ಮ ಅಭಿಮಾನದ ಬಂಡೆ ಶಂಕರ ಭಾಗವತರು ಯಕ್ಷಗಾನದ ಮದ್ದಲೆ ವಾದಕರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಶಂಕರ ಭಾಗವತರು ಮೂಲತಃ ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನ ಸಿಸ್ತಮುಡಿಯವರು. ದಕ್ಷಿಣೋತ್ತರ ಕನ್ನಡ ಜಿಲ್ಲೆಯಲ್ಲಿ ಅವರೀಗ ಮನೆಮಾತು. ಮದ್ದಲೆಯಲ್ಲಿ ವಿಶೇಷ ಪ್ರಾವೀಣ್ಯ ಸಂಪಾದಿಸಿರುವ ಭಾಗವತರು ಕುರಿತ ಅಧ್ಯಯನ ಪ್ರವೃತ್ತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಶಾಸ್ತ್ರೀಯತೆ, ಆಧುನಿಕತೆ ಎರಡನ್ನೂ ಕರಗತ ಮಾಡಿಕೊಂಡಿರುವ ಶಂಕರ ಭಾಗವತರು ಯಾವುದೇ ಮೇಳಕ್ಕೆ ದೊಡ್ಡ ಆಸ್ತಿ. ನಾನಂತೂ ಅವರನ್ನು ಯಾವಾಗಲೂ ತಬಲಾ ಮಾಂತ್ರಿಕ ಜಾಕೀರ್ ಹುಸೇನ್ಗೆ ಹೋಲಿಸುವುದರಲ್ಲಿ ಖುಷಿ ಪಡುತ್ತೇನೆ. ತಬಲಾವನ್ನೂ ಅಭ್ಯಾಸ ಮಾಡಿರುವ ಇವರು, ಮದ್ದಲೆ-ತಬಲಾದ ಜುಗಲ್ಬಂದಿ ವೇದಿಕೆಗಳನ್ನೂ ಹಂಚಿಕೊಂಡಿದ್ದಾರೆ.

ಒಂದು ವಿಸ್ಮಯವನ್ನು ಹೇಳಲೇಬೇಕು. ಲೋಕದ ಬೆಳಕು ಕಂಡು ೧೦ ವರ್ಷದ ವರೆಗೂ ಬಾಲಕ ಶಂಕರ ಮಾತೇ ಆಡಿರಲಿಲ್ಲವಂತೆ. ಆದರೆ, ಆಗಲೇ ಮದ್ದಲೆಯೊಂದಿಗೆ ಆಟ ಆಡುತ್ತಿದ್ದನಂತೆ. ಹೆತ್ತವರು ಹರಕೆ ಹೊತ್ತಿದ್ದರ ಫಲವಾಗಿ ಬಾಲಕನ ನಾಲಗೆಯಲ್ಲಿ ಶಬ್ದ ಸಂಚಾರವಾಯಿತಂತೆ.

ಶಂಕರ ಭಾಗವತರು ಕಲಾ ಬದುಕಿನ ಔನ್ನತ್ಯಕ್ಕೆ ಏರಿದ್ದಾರೆ. ಸಂದರ್ಭದಲ್ಲಿ ಅವರನ್ನು ಅಭಿನಂದಿಸಲು ರಾಜಧಾನಿಯ ಅಭಿಮಾನಿಗಳು ಸಜ್ಜಾಗಿದ್ದಾರೆ. ಇದೇ ಭಾನುವಾರ (ಏಪ್ರಿಲ್ ೧೯) ಮಧ್ಯಾಹ್ನ ಪುರಭವನದಲ್ಲಿನಾದ ವೈಭವ - ೫೫ಶೀರ್ಷಿಕೆಯಡಿ ಭಾಗವತರನ್ನು ಸಂಮಾನಿಸಲಾಗುತ್ತಿದೆ. ಯಕ್ಷಗಾನ ಪ್ರದರ್ಶನಗಳೂ ನಡೆಯಲಿವೆ. ಭಾಗವತರು ಏಕಕಾಲದಲ್ಲಿ ರಿಂದ ಮದ್ದಲೆ ನುಡಿಸುವ ಉತ್ಸಾಹದಲ್ಲಿ ಇದ್ದಾರೆ.

ಹೀಗಾಗಿ ಇದು ಶಂಕರನ ಧ್ಯಾನದ ಕಾಲ. ಶಂಕರ ಭಾಗೋತರ ಮೇಲಿನ ಪ್ರೀತಿ, ಅಭಿಮಾನಕ್ಕಾಗಿ ಬರೆಹ. ಜತೆಗೆ ಅವರು ಮದ್ದಲೆ ವಿಭಾಗದಲ್ಲಿ ಗೌರೀಶಂಕರದ ಎತ್ತರಕ್ಕೆ ಏರಲಿ ಎಂಬ ಹಾರೈಕೆ.

Last Posts