ಕೆರೆಮನೆ ಮೇಳಕ್ಕೆ ೭೫, ಶಿವರಾಮ ಹೆಗಡೆ ಜನ್ಮ ಶತಮಾನೋತ್ಸವ, ಯಕ್ಷ ತೇರಿಗೆ ಅಮೃತಕಳಶ

ದು ಸೂರ್ಯೋದಯದ ಮಯ. ಶರಾವತಿ ನದಿ ದಂಡೆಯಲ್ಲಿ ನಿಂತು ಕಿಸೆಗೆ ಕೈಹಾಕಿದರೆ ಒಂದು ಪಾವಲಿಯೂ ಇಲ್ಲ. ಕಾಲದಲ್ಲಿ ಹೊಳೆ ದಾಟಲು ದೋಣಿಯವನಿಗೆ ಒಂದಾಣೆ ಕೊಡಬೇಕಿತ್ತು.

ವ್ಯಕ್ತಿ ಚಿಂತಿಸಲಿಲ್ಲ. ನೇರ ದುರ್ಗಾಕೇರಿಯ (ಹೊನ್ನಾವರ) ಕಾಸಿಂ ಸಾಯ್‌ಬನ ಬೀಡಿ ಅಂಗಡಿಗೆ ತೆರಳಿ ಬಾಗಿಲು ತಟ್ಟಿದ. ವಿಷಯ ತಿಳಿಸಿದಾಗ ಕಾಸಿಂ ದುಡ್ಡು ತೆಗೆದಿಟ್ಟ. ಸಾಮಾನ್ಯರಾಗಿದ್ದರೆ ಅದನ್ನು ಎತ್ತಿಕೊಂಡು ಹೊರಡುತ್ತಿದ್ದರು.

ಆದರೆ
ಹಣದ ಅಗತ್ಯವಿದ್ದವ ಅಪ್ಪಟ ಸ್ವಾಭಿಮಾನಿ. ಬ್ಯಾಡ್ವೋ ಸೈಬ. ಒಂದಾಣೆಯಷ್ಟು ಬೀಡಿ ಕಟ್ಟಿ ಕೊಡ್ತೇನೆ ಎಂದ. ಬೀಡಿ-ಗೀಡಿ ಏನೂ ಬ್ಯಾಡ ಮಾಣಿ, ರೊಕ್ಕ ತಗಂಡು ಹೋಗೆಂದು ಕಾಸಿಂ ಜಬರ್‌ದಸ್ತ್ ಮಾಡಿದ. ಈ ಮನುಷ್ಯ ಬಿಡಬೇಕಲ್ಲ... ಹಠಮಾರಿಯೂ ಹೌದು. ಬೀಡಿ ಸುತ್ತುವುದಕ್ಕೇ ಕುಳಿತ. ಹತ್ತು ಜಾಸ್ತಿಯೇ ಬೀಡಿ ಕಟ್ಟಿದ. ನಂತರ ದುಡ್ಡು ತೆಗೆದುಕೊಂಡು ದೋಣಿ ಏರಿದ.

ಹೀಗೆ ತಾಪತ್ರಯ ಪಟ್ಟುಕೊಂಡೂ ತನ್ನತನ ಉಳಿಸಿಕೊಂಡವರು ಯಕ್ಷಗಾನದ ‘ಲೆಜೆಂಡ್’ ಕೆರೆಮನೆ ಶಿವರಾಮ ಹೆಗಡೆ. ಶಿವರಾಮ ಹೆಗಡೆ ನೆನಪಾದಾಗ ಸ್ವಾತಂತ್ರ್ಯ ಪೂರ್ವದ ಈ ಘಟನೆಯನ್ನು ಉತ್ತರ ಕನ್ನಡದ ಹಳಬರು ಈಗಲೂ ಮೆಲುಕು ಹಾಕುತ್ತಾರೆ. ಜತೆಗೇ ಅವಂಗೆ ಸಿಕ್ಕಾಪಟ್ಟೆ ‘ಶರ್ಕೆ’ (ಹಠ) ಇತ್ತು. ಎಂತಹ ಮೇಳ ಕಟ್ಟಿದ. ರಾಷ್ಟ್ರಪ್ರಶಸ್ತಿಗೂ ಭಾಜನನಾದ ಎಂದು ಸೇರಿಸುತ್ತಾರೆ.

ಕೆರೆಮನೆ ಶಿವರಾಮ ಹೆಗಡೆ ಅಂದರೇ ಹಾಗೆ. ಬದುಕನ್ನು ಸವಾಲಾಗಿ ಸ್ವೀಕರಿಸಿದ ಅವರೆಂದೂ ಇನ್ನೊಬ್ಬರ ಋಣಕ್ಕೆ ಬಿದ್ದವರಲ್ಲ. ಎಳೆಯ ಪ್ರಾಯದಲ್ಲೇ ಅವರೊಬ್ಬ ಛಲಗಾರ. ಬೀಡಿ ಕಟ್ಟಿ ದೋಣಿ ದಾಟಿದಂತಹುದೇ ಹಲವು ದೃಷ್ಟಾಂತಗಳು ಅವರ ಬಗ್ಗೆ ಇವೆ.

ಶಿವರಾಮ ಹೆಗಡೆ ಬದುಕುಳಿದಿದ್ದರೆ ಅವರ ನೂರರ ವಯಸ್ಸಿನ ಒಡ್ಡೋಲಗವನ್ನು ಯಕ್ಷಲೋಕ ಕಾಣಬಹುದಿತ್ತು. ಆ ಭಾಗ್ಯವಿಲ್ಲದಿದ್ದರೂ ಹೆಗಡೆಯವರ ಕೀರ್ತಿಸೌಧದಂತಿರುವ ‘ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ’ಯೀಗ ೭೫ ವಸಂತ ಪೂರೈಸಿದೆ. ಮೇಳವನ್ನು ಎತ್ತರಕ್ಕೆ ಬೆಳೆಸಿದವರು ಶಿವರಾಮರ ಪುತ್ರ ಕೆರೆಮನೆ ಶಂಭು ಹೆಗಡೆ. ದುರಾದೃಷ್ಟವೆಂದರೆ ಈ ಹರುಷದ ಹದಗಾಲದಲ್ಲಿ ಅವರೂ ಇಲ್ಲ. ಮಂಡಳಿಯ ವರಬಲದಂತಿದ್ದ ಮಹಾಬಲ ಹೆಗಡೆಯವರೂ ಈ ಲೋಕದಲ್ಲಿಲ್ಲ.

ನಿಜಕ್ಕೂ ಯಕ್ಷಗಾನದ ತೇರಿನಂತಹ ಕೆರೆಮನೆಯ ಇಡಗುಂಜಿ ಮೇಳಕ್ಕೆ ಇದೊಂದು ಬಗೆಯ ಸೂತಕದ ಕಾಲ. ವರ್ಷದ ಅವಧಿಯಲ್ಲಿ ಶಂಭು-ಮಹಾಬಲ ಹೆಗಡೆ ಅಗಲಿದ ದುಃಖದಲ್ಲಿ ಮಂಡಳಿಯಿದೆ. ನೋವು, ನಲಿವುಗಳನ್ನು ಕಂಡುಂಡೇ ಮೇಳವು ಯಾಣದ ಭೈರವೇಶ್ವರ ಶಿಖರದಷ್ಟು ಅಚಲವಾಗಿ ನಿಂತಿದೆ. ಸಾಂಸ್ಕೃತಿಕ ಜವಾಬ್ದಾರಿ ಹೊತ್ತುಕೊಂಡ ಕಲಾತಂಡವೊಂದು ಕರ್ತವ್ಯ ಮರೆಯುವಂತಿಲ್ಲ. ಹೀಗಾಗಿ ಅಮೃತ ಮಹೋತ್ಸವಕ್ಕೆ ಅಣಿಯಾಗಿದೆ. ಇದು ಹೊಸ ಹುಡುಕಾಟ, ಮಥನದ ನಿರೀಕ್ಷೆಯದು. ಅದಕ್ಕಾಗಿ ಈ ಅಕ್ಷರಾರೋಹಣ ಔಚಿತ್ಯವೆನಿಸಿತು.
ಆದರ್ಶದ ಹಾದಿ
ಆದರ್ಶ, ಮೌಲ್ಯ, ಕಲಾತ್ಮಕ ಧೋರಣೆ, ಸುಧಾರಣೆಯ ವಿಷಯದಲ್ಲಿ ಕೆರೆಮನೆ ಮೇಳವೇ ಮಾದರಿ. ಅದು ಇಂದಿಗೂ ಉಳಿದಿದ್ದರೆ ಶಿವರಾಮ ಹೆಗಡೆ ಹಾಕಿದ ಅಡಿಪಾಯ, ಶಂಭು ಹೆಗಡೆಯವರ ಶ್ರಮವೇ ಕಾರಣ. ‘ಕೆರೆಮನೆ ಮೇಳದ ಚೌಕಿಯಲ್ಲಿ (ಗ್ರೀನ್ ರೂಮ್) ಹೆಣ್ಣು ಮಕ್ಕಳು ಯಾವ ತೊಂದರೆಯಿಲ್ಲದೆ ಮಲಗಿಕೊಳ್ಳಬಹುದು’ ಎನ್ನುವ ಮಾತೊಂದಿದೆ. ಇದು ಉತ್ಪ್ರೇಕ್ಷೆಯದ್ದೇನೂ ಅಲ್ಲ. ಮೇಳ ಮರ್ಯಾದಸ್ಥರದ್ದು ಎನ್ನಲು ಅನುಭವಿಗಳು ಕೊಟ್ಟ ಪ್ರಶಸ್ತಿ ಇದೆನ್ನಲಡ್ಡಿಯಿಲ್ಲ. ಅಂದರೆ ಆಟಕ್ಕೆ ಹೋದ ಚಿಕ್ಕ ಮಕ್ಕಳ ತಾಯಂದಿರು ಹಾಲುಣಿಸಲು, ಅನಾರೋಗ್ಯಕ್ಕೆ ತುತ್ತಾದವರು ಚೌಕಿಗೆ ಹೋಗಿ ವಿಶ್ರಾಂತಿ ಮಾಡಿದ ನಿದರ್ಶನಗಳಿವೆ.

ದೂರದರ್ಶನದಲ್ಲಿ ಮೊದಲ ಬಾರಿ ಪ್ರದರ್ಶನ, ವಿದೇಶ ಯಾತ್ರೆ ಸೇರಿದಂತೆ ಹಲವು ಪ್ರಥಮಗಳಿಗೆ ಕಾರಣವಾಗಿದ್ದು ಕೆರೆಮನೆ ಮೇಳ. ಮೇಳ ಜನ್ಮವೆತ್ತಲು ಶಿವರಾಮರ ಹಠದ ಸ್ವಾಭಾವವೇ ಪ್ರೇರಣೆ. ಅವರು ವೇಷಧಾರಿಯಾಗಿ ಬೆಳಕಿಗೆ ಬರುತ್ತಿದ್ದಾಗ ವಿಶೇಷವಾಗಿ ಉತ್ತರ ಕನ್ನಡದಲ್ಲಿ ಯಕ್ಷಗಾನಕ್ಕೊಂದು ವ್ಯವಸ್ಥಿತ ಸಂರಚನೆಯೇ ಇರಲಿಲ್ಲ. ಒಮ್ಮೆ ಮುರ್ಡೇಶ್ವರದಲ್ಲಿ ಹತ್ತಾರು ಆಟ ಆಡಲು ಹೋಗಿದ್ದರಂತೆ. ಅವರನ್ನು ಕರೆದುಕೊಂಡು ಹೋಗಿದ್ದ ಸ್ತ್ರೀವೇಷಧಾರಿ ಮೂರ್‍ನಾಲ್ಕು ಪ್ರದರ್ಶನವಾಗುತ್ತಿದ್ದಂತೆ, ಹೆಚ್ಚಿನ ವೇತನದ ಆಸೆಗೆ ಬಿದ್ದು, ಗುಂಡಬಾಳಕ್ಕೆ ಹೊರಟರಂತೆ. ಇದನ್ನೊಂದು ಆಭಾಸ, ಅಪಮಾನವೆಂದೇ ಭಾವಿಸಿದ ಹೆಗಡೆ ಅಂದೇ ಸ್ವಂತ ಮೇಳಕ್ಕೆ ಅಡಿಗಲ್ಲು ಹಾಕಿದರು. ಆ ಕಾಲದ ಶ್ರೇಷ್ಠ ಭಾಗವತ ವೆಂಕಟರಮಣ ಯಾಜಿ ಜೀವದ ಗೆಳೆಯನಂತೆ ಬೆನ್ನಿಗೆ ನಿಂತರು.

ಶಿವರಾಮ ಹೆಗಡೆ ಕಾಲದಲ್ಲಿ ಮೇಳದ ಬಹುದೊಡ್ಡ ಸಾಧನೆಯೆಂದರೆ ಸುಸಂಸ್ಕೃತರು, ವಿದ್ವಾಂಸರು, ಯಕ್ಷಗಾನೇತರ ಕ್ಷೇತ್ರದ ಸಹೃದಯರನ್ನು ಈ ಕಲೆಯೆಡೆಗೆ ಎಳೆತಂದಿದ್ದು. ಈ ಮೂಲಕ ಯಕ್ಷಗಾನಕ್ಕೊಂದು ಗೌರವದ ಕವಚ ತೊಡಿಸಿದ್ದು. ಶಂಭು ಹೆಗಡೆ ಇದನ್ನು ವಿಸ್ತರಿಸುತ್ತ ಹೋದರು. ಕಲಾವಿದ, ಯಜಮಾನ, ಹೊಸತನದ ಆವಿಷ್ಕಾರದ ಸೃಜನಶೀಲರಾಗಿ ಬಡಗು ತಿಟ್ಟಿನ ಸೊಬಗನ್ನು ಶಿಸ್ತುಬದ್ಧಗೊಳಿಸಿದರು. ಮಹಾಬಲ ಹೆಗಡೆ, ಗಜಾನನ ಹೆಗಡೆ, ನೆಬ್ಬೂರು ಭಾಗವತರೊಂದಿಗಿನ ಶಂಭು ಹೆಗಡೆಯವರ ಮೇಳ ಸುವರ್ಣ ಯುಗ ಕಂಡಿದೆ. ಯಕ್ಷಗಾನದ ಅಗ್ರೇಸರನಾಗಿ ಮೇಳವನ್ನು ಮುನ್ನಡೆಸಿದ ಶಂಭು ಹೆಗಡೆ, ಗುಣವಂತೆಯಲ್ಲಿ 'ದಿ. ಶಿವರಾಮ ಹೆಗಡೆ ರಂಗಮಂದಿರ' ಕಟ್ಟಿದ್ದಾರೆ. ಯಕ್ಷಗಾನ ಶಾಲೆಯೂ ಇದೆ. ಈ ಎಲ್ಲದರ ವಾರಸುದಾರಿಕೆಯೀಗ ಶಂಭು ಪುತ್ರ ಶಿವಾನಂದ ಹೆಗಡೆಯ ಹೆಗಲೇರಿದೆ.

ಇಡಗುಂಜಿ
ಮೇಳದ ಬಗ್ಗೆ ಸಂಶೋಧನಾ ಗ್ರಂಥ (ಡಾ. ರಾಮಕೃಷ್ಣ ಜೋಶಿ) ಬಂದಿದೆ. ಶಂಭು ಹೆಗಡೆಯವರ ಕುರಿತೇ ಡಾ.ಜಿ.ಎಸ್. ಭಟ್ಟರು ಅಧ್ಯಯನ ಗ್ರಂಥ ಬರೆದಿದ್ದಾರೆ. ಮನೆತನದ ಮೂವರು ಮೇರು ಕಲಾವಿದರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸಂದಿದೆ. ಮಂಡಳಿ ತನ್ನ ಪ್ರತಿ ಹೆಜ್ಜೆ ಗುರುತನ್ನೂ ದಾಖಲಿಸುತ್ತಿದೆ. ಯಕ್ಷಗಾನದ ಇತಿಹಾಸದಲ್ಲೇ ಇದೊಂದು ಮೈಲುಗಲ್ಲು. ಈ ಸಂಭ್ರಮಕ್ಕೆ ಅಭಿಮಾನ ಪೂರ್ವಕ ಸೇಸೆಯ ಮಳೆಗರೆಯಬಹುದು.
ಹೆಗಲು ಕೊಟ್ಟವರು
ಇಡಗುಂಜಿ ಮೇಳದ ಸಾರಥ್ಯ ವಹಿಸಿದವರು ಕೆರೆಮನೆ ಬಂಧುಗಳು. ಅವರಿಗೆ ಹೆಗಲು ಕೊಟ್ಟವರು ಹಲವರು. ಪ್ರತಿಫಲದ ಅಪೇಕ್ಷೆಯಿಲ್ಲದೆ ಸ್ವಂತ ಮನೆಯಂತೆ ನಡೆದುಕೊಂಡು ಸಹಕರಿಸಿದವರಲ್ಲಿ ಹಣಗಾರು ನಾರಾಯಣ ಹೆಗಡೆ (ನೆಬ್ಬೂರು ಭಾಗವತರು) ಪ್ರಮುಖರು. ಇವರು ಶಿವರಾಮ ಹೆಗಡೆಯವರಿಗೂ ಪದ್ಯ ಹೇಳಿದ್ದಾರೆ. ಮಹಾಬಲ-ಶಂಭು-ಗಜಾನನ ಅವರಿಗೂ ಹಿಮ್ಮೇಳ ಒದಗಿಸಿದ್ದಾರೆ. ನಂತರ ಶಿವಾನಂದ ಹೆಗಡೆ ಹಾಗೂ ಅವರ ಮಕ್ಕಳಾದ ಶ್ರೀಧರ, ಶಶಿಧರರನ್ನೂ ಕುಣಿಸಿದ್ದಾರೆ. ಶಿವರಾಮ ಹೆಗಡೆ ಇದ್ದಾಗಲೇ ಕೆರೆಮನೆಗೆ ಹೋಗಿ ಅಲ್ಲಿಯವರೇ ಆಗಿ ಉಳಿದು, ಈ ಮನೆತನದ ೩ ತಲೆಮಾರನ್ನೂ ಬಲ್ಲವರು. ಮೇಳದ ಹಿರಿಯಣ್ಣನ ಸ್ಥಾನದಲ್ಲಿ ಇವರೊಬ್ಬರೇ ಈಗ ಇದ್ದಾರೆ. ನೆಬ್ಬೂರರ ಅನುಭವ ಈ ಮೇಳದ ನೋವು, ನಲಿವುಗಳೆರಡನ್ನೂ ತೆರೆದಿಡುತ್ತದೆ.

ಸಣ್ಣ ಮಾಣಿಯಾಗಿದ್ದಾಗಲೇ ಸೇರಿಕೊಂಡ ಮೇಳ ಇಷ್ಟು ಎತ್ತರಕ್ಕೆ ಬೆಳೆದಿದೆ ಎಂಬುದೇ ನೆಬ್ಬೂರರಿಗೆ ಹೆಮ್ಮೆ. ಮೇಳದಲ್ಲಿ ೫ ದಶಕ ಕಾಲ ಸೇವೆ ಸಲ್ಲಿಸಿರುವ ನೆಬ್ಬೂರರು, ಶಂಭು ಹೆಗಡೆಯವರ ರಂಗಸ್ಥಳದ ಯಶಸ್ಸಿನ ಪ್ರಧಾನ ಸೂತ್ರಧಾರರು. ಶಂಭು ಹೆಗಡೆ, ನೆಬ್ಬೂರು ಇಲ್ಲದೇ ಪ್ರದರ್ಶನಕ್ಕೆ ಹೋಗಿದ್ದೇ ಕಡಿಮೆ. ಅವರ ಪಾತ್ರಗಳಿಗೆ ನೆಬ್ಬೂರು ನಿನಾದ ಅಷ್ಟು ಅಗತ್ಯವಾಗಿತ್ತು. ಇಬ್ಬರೂ ಸ್ನೇಹಿತರಾಗಿ ಒಂದೇ ತಾಯಿಯ ಮಕ್ಕಳಂತೆ ಇದ್ದವರು. ಅದಕ್ಕಾಗಿ ಶಂಭು ಹೆಗಡೆ ಅವಧಿಯಲ್ಲಿ ಮೇಳಕ್ಕಾಗಿ ಸರ್ವ ಶ್ರಮವನ್ನೂ ಹಾಕಿದವರು ನೆಬ್ಬೂರು. ನೆಬ್ಬೂರರನ್ನು ಪ್ರತ್ಯೇಕಿಸಿ ಕೆರೆಮನೆ ಮೇಳವನ್ನು ನೋಡಲು ಸಾಧ್ಯವೇ ಇಲ್ಲ. ಮಂಡಳಿಯ ಎಲ್ಲ ಕಾಲಘಟ್ಟಕ್ಕೆ ಅವರೊಬ್ಬರೇ ಪ್ರತ್ಯಕ್ಷದರ್ಶಿಯಾಗಿ ಇದ್ದಾರೆ.
ರಾತ್ರಿ ಆಟ, ಹಗಲು ಪ್ರಚಾರ
ಪೂರ್ಣ ಪ್ರಮಾಣದ ವ್ಯವಸಾಯಿ ಸ್ವರೂಪದಲ್ಲಿ ಮೇಳವಿದ್ದಾಗ, ರಾತ್ರಿಯಿಡೀ ಪದ್ಯ ಹೇಳಿದ ಭಾಗವತರು, ಬೆಳಗ್ಗೆ ಸ್ವಲ್ಪ ನಿದ್ರೆ ಮಾಡಿ ಪ್ರಚಾರಕ್ಕೆ ಹೋಗುತ್ತಿದ್ದರಂತೆ. ಮದ್ದಲೆಯ ಮೋಡಿಗಾರ ದುರ್ಗಪ್ಪ ಗುಡಿಗಾರ ಆಗ ಇವರೊಂದಿಗೆ ವಾಹನ ಚಾಲಕರಾಗಿ ತೆರಳುತ್ತಿದ್ದರು. ಅಷ್ಟೇ ಅಲ್ಲ. ಟೆಂಟ್ ಕಟ್ಟುವುದಕ್ಕೆ, ಕುರ್ಚಿ ಹಾಕುವುದಕ್ಕೂ ಈ ಸೂತ್ರದಾರ ನೆರವಾಗಿದ್ದಾರೆ. ಅಡುಗೆ ಭಟ್ಟರಿಗೂ ಸಹಾಯ ಮಾಡಿದ್ದುಂಟು. ಕೊಳಗಿ ಅನಂತ ಹೆಗಡೆ ಹಾಗೂ ಭಾಗವತರು ಈ ಕಾರ್ಯಕ್ಕೆ ಸದಾ ಸಿದ್ಧರಿರುತ್ತಿದ್ದರು.

ಸ್ವತಃ
ಸ್ಥಿತಿವಂತರಲ್ಲದ ಭಾಗವತರು ಮಂಡಳಿ ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿದ್ದಾಗ ಶಿರಸಿಯ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ತಮ್ಮದೇ ಖಾತೆಯಿಂದ ಸಾಲ ತೆಗೆಸಿಕೊಟ್ಟಿದ್ದೂ ಇದೆ. ಬಳಿಕ ಒಂದೇ ವರ್ಷದಲ್ಲಿ ಶಂಭು ಹೆಗಡೆ ಈ ಸಾಲ ತೀರಿಸಿದ್ದರು. ಭಾಗವತರಿಗೆ ಕಾಯಂ ಆಗಿ ಪದ್ಯ ಹೇಳುವಷ್ಟು ಆರೋಗ್ಯ ಈಗ ಇಲ್ಲ. ಮೇಳದ ಸಂಚಾಲಕರು ವಿಶೇಷ ಸಂದರ್ಭಗಳಲ್ಲಿ ಬಯಸಿದರೆ ಅವರು ಎಂದಿನ ಪ್ರೀತಿಯಿಂದಲೇ ಹೋಗಲು ತಯಾರಾಗುತ್ತಾರೆ. ಎಂತಹ ಕಠಿಣ ಸನ್ನಿವೇಶದಲ್ಲೂ ಮಂಡಳಿ ತೊರೆಯುವ, ಅಧಿಕ ಸಂಬಳದ ಆಸೆ ತೋರಿಸಿದ ಇನ್ನೊಂದು ಮೇಳಕ್ಕೆ ಜಿಗಿಯುವ ಆಲೋಚನೆಯನ್ನೂ ಮಾಡಿದವರಲ್ಲ ನೆಬ್ಬೂರು. ಹೆತ್ತ ತಾಯಿ ಮರಣಶಯ್ಯೆಯಲ್ಲಿರುವಾಗಲೇ ಮಂಡಳಿಯೊಂದಿಗೆ ಫ್ರಾನ್ಸ್ ಪ್ರವಾಸಕ್ಕೆ ಹೊರಟು ಕರ್ತವ್ಯ ಪ್ರಜ್ಞೆ ಮೆರೆದವರು. ಅಂತಹ ಭಾಗವತರನ್ನು ಮಾತನಾಡಿಸಿದರೆ, ಅವರ ಕಂಠ ಗದ್ಗದಿತವಾಗುತ್ತದೆ. ಈ ಸಿಂಹಾವಲೋಕನದಲ್ಲಿ ಶಂಭು-ಮಹಾಬಲ ಹೆಗಡೆಯವರಾದರೂ ಇರಬೇಕಿತ್ತು. ಶಿವಾನಂದನ ಪ್ರಯತ್ನಕ್ಕೆ ಫಲ ಸಿಗಲಿ. ಮಂಡಳಿಯ ವೈಭವದ ಮೆರಗು ಇಮ್ಮಡಿಸಲಿ ಎಂದು ಆಶಿಸಿ ಮೌನಕ್ಕೆ ಶರಣಾಗುತ್ತಾರೆ.
ಅಮೃತ ಸಂಭ್ರಮ
ತಿಂಗಳ ೨೫ ರಿಂದ ೨೭ ರ ವರೆಗೆ ಗುಣವಂತೆಯಲ್ಲಿ ಕೆರೆಮನೆ ಶಿವರಾಮ ಹೆಗಡೆ ಜನ್ಮ ಶತಮಾನೋತ್ಸವ, ಮಂಡಳಿಯ ಅಮೃತ ಮಹೋತ್ಸವ ಹಾಗೂ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ, ವಿಚಾರ ಸಂಕಿರಣ ನಡೆಯಲಿದೆ. ಶಂಭು ಹೆಗಡೆಯವರ ಆಳೆತ್ತರದ ಕಂಚಿನ ಪ್ರತಿಮೆಯೂ ಅನಾವರಣಗೊಳ್ಳಲಿದೆ. ಇಡೀ ಸಾಂಸ್ಕೃತಿಕ ವಲಯವನ್ನು ಬೆಸೆಯುವ ಮಹತ್ವದ ಉದ್ದೇಶದ ಈ ಕಾರ್ಯಕ್ರಮದ ರೂವಾರಿ ಕೆರೆಮನೆ ಮೇಳದ ಈಗಿನ ಮುಂದಾಳತ್ವ ವಹಿಸಿಕೊಂಡಿರುವ ಶಿವಾನಂದ ಹೆಗಡೆ.
(ವಿಜಯ ಕರ್ನಾಟಕ ಲವಲವಿಕೆಯಲ್ಲಿ ಈ ಲೇಖನ ಪ್ರಕಟವಾಗಿದೆ. ಚಿತ್ರ ಕ್ರಪೆ : ಶಿವಾನಂದ ಹೆಗಡೆ ಕೆರೆಮನೆ ಹಾಗೂ ಬಾಲು ಮಂದರ್ತಿ)

ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ರಾಜಹಿಂಸೆ

ಇತ್ತೀಚೆಗೆ ಊರಿಗೆ ಹೋಗುವಾಗ ರಾಜ್ಯ ಸಾರಿಗೆ ಇಲಾಖೆಯ ಬಸ್‌ನಲ್ಲಿ ಸೊಳ್ಳೆ, ತಿಗಣೆಗಳಿಂದ ಹಿಂಸೆಯಾಯಿತು. ಹಿಂದೆಯೂ ಈ ಅನುಭವ ಆಗಿತ್ತು. ಅನೇಕ ಸ್ನೇಹಿತರೂ ಈ ಬಗ್ಗೆ ನನ್ನ ಗಮನ ಸೆಳೆದಿದ್ದರು. ಹೀಗಾಗಿ ಊರಿನಿಂದ ವಾಪಸ್ ಬರುತ್ತಿದ್ದಂತೆ, ಈ ವಿಷಯವಿಟ್ಟುಕೊಂಡು, ನಮ್ಮ ಪತ್ರಿಕೆಗಾಗಿ ವಿಶೇಷ ವರದಿ ಬರೆದೆ. ಅದು ಉತ್ತಮ ಚಿತ್ರದೊಂದಿಗೆ (ಕಾರ್ಟೂನ್) ನವೆಂಬರ್ ೩೦ ರಂದು ಪ್ರಕಟವಾಯಿತು. ಬಳಿಕ ಸಾರಿಗೆ ಇಲಾಖೆ, ತಾನು ತಿಗಣೆ ನಿವಾರಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿಯೂ ಪ್ರಕಟಣೆ ಕಳುಹಿಸಿತ್ತು. ವೈಯಕ್ತಿಕವಾಗಿ ನನಗೂ ಈ ವರದಿಯ ಬರವಣಿಗೆ ಇಷ್ಟವಾಗಿದೆ. ಹೀಗಾಗಿ ಪತ್ರಿಕೆಯಲ್ಲಿ ಬಂದ ವರದಿಯ ಯಥಾವತ್ತನ್ನು ಬ್ಲಾಗ್‌ಗೆ ಹಾಕಿದ್ದೇನೆ. ನಿಮಗೂ ಇಷ್ಟವಾದರೆ ಒಂದು ಪ್ರತಿಕ್ರಿಯೆ ಹಾಕಿ.

ಕೊಂಡದಕುಳಿ ಅವಳಿ, ಶತಮಾನ ಸಂಭ್ರಮದಲ್ಲಿ

ಭಾನುತನುಜ ಭಳಿರೇ...’ ಎಂದು ಮಟ್ಟೆ ತಾಳದ ಗತ್ತಿನಲ್ಲಿ ಮಾವಿನ ಟೊಂಗೆ ಝಳಪಿಸುತ್ತ ಆ ವಾಲಿ ಬಂದರೆ ರಂಗಸ್ಥಳಕ್ಕೆ ಒಂದು ಕ್ಷಣ ನಡುಕ. ಈ ವೇಷಧಾರಿ, ಎದುರು ಪಾತ್ರಧಾರಿಯ ಅರ್ಧ ಶಕ್ತಿಯನ್ನೂ ಎಳೆದುಕೊಂಡು ಬಿಡುತ್ತಿದ್ದ. ಈ ವಾಲಿಗೆ ಸುಗ್ರೀವನಾಗಿ ಸಮದಂಡಿಯಾಗಿ ನಿಲ್ಲಬಲ್ಲವನು ಒಬ್ಬನೇ ಇದ್ದ - ಅವರ ಅವಳಿ ಸಹೋದರ.

ಹಾಗೆ ವಾಲಿ - ಸುಗ್ರೀವರಾಗಿ ಪ್ರಸಿದ್ಧರಾದವರು ರಾಮ ಹೆಗಡೆ ಕೊಂಡದಕುಳಿ ಮತ್ತು ಲಕ್ಷ್ಮಣ ಹೆಗಡೆ ಕೊಂಡದಕುಳಿ. ಯಕ್ಷಗಾನದ ಏಕೈಕ ‘ಅವಳಿ ಜೋಡಿ’ಯಾಗಿದ್ದ ಈ ಸಹೋದರರು ರಂಗದ ದಂತಕತೆ ಕೆರೆಮನೆ ಶಿವರಾಮ ಹೆಗಡೆ ಸಮಕಾಲೀನರು.

ಹಿಂದಿನ ತಲೆಮಾರಿನವರು ರಾಮ ಹೆಗಡೆ ಎಂದಾಗ ವಾಲಿಯ ಪಾತ್ರದ ಬಗ್ಗೆ ನೆನಪಿನ ಚೀಲ ಬಿಚ್ಚಿಡುತ್ತಾರೆ. ಯಾವಾಗಲೂ ಸುಗ್ರೀವನಾಗಿ ಜತೆಗಿರುತ್ತಿದ್ದವರು ತಮ್ಮ ಲಕ್ಷ್ಮಣ. ಒಮ್ಮೆ ಬೇರೊಬ್ಬ ಕಲಾವಿದ ಸುಗ್ರೀವನ ಪಾತ್ರ ಮಾಡಿ, ರಾಮ ಹೆಗಡೆ ಪ್ರವೇಶವಾಗುತ್ತಿದ್ದಂತೆ ಹೆದರಿ ಎಚ್ಚರ ತಪ್ಪಿ ಬಿದ್ದಿದ್ದರಂತೆ. ಆಟವೂ ನಿಂತು ಹೋಯಿತಂತೆ. ಲಕ್ಷ್ಮಣ ಹೆಗಡೆಯವರ ಹನುಮಂತನ ಪಾತ್ರಕ್ಕೆ ಒಳ್ಳೆಯ ಹೆಸರಿತ್ತು. ಈ ಜೋಡಿಯ ಭರತ-ಧರ್ಮಾಂಗದ, ಭೀಷ್ಮ-ಪರಶುರಾಮ, ಬಲಿ-ವಾಮನ, ರಾವಣ-ಕಾರ್ತವೀರ್ಯನ ಪಾತ್ರಗಳೂ ಜನಪ್ರಿಯವಾಗಿದ್ದವು.

ಯಕ್ಷಗಾನಕ್ಕೆ ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಕೆರೆಮನೆ ಶಿವರಾಮ ಹೆಗಡೆ ಆ ಕಾಲದಲ್ಲೇ ಸೀಮೋಲ್ಲಂಘನಗೈದ ಶ್ರೇಷ್ಠ ನಟ. ಶಿವರಾಮ ಹೆಗಡೆ ಅವರಂತೆ ಕೊಂಡದಕುಳಿ ಸಹೋದರರೂ ಸ್ವಂತ ಮೇಳ ಕಟ್ಟಿದ್ದರು. ಅದರ ವ್ಯಾಪ್ತಿ ಉತ್ತರ ಕನ್ನಡಕ್ಕೆ ಸೀಮಿತವಾಗಿತ್ತು. ಪ್ರಾಯಶಃ ಇದೇ ಕಾರಣದಿಂದ ಪ್ರಥಮ ದರ್ಜೆಯ ಕಲಾವಿದರಾಗಿದ್ದ ಕೊಂಡದಕುಳಿಯವರಿಗೆ ಹೆಚ್ಚಿನ ಅವಕಾಶ ದೊರಕಲಿಲ್ಲ. ಶೈಲಿಯ ದೃಷ್ಟಿಯಿಂದ ನೋಡಿದರೆ ಇವರದ್ದು ಅಖಂಡವಾಗಿ ಮುಂದುವರಿದಿಲ್ಲ. ರಾಮ-ಲಕ್ಷ್ಮಣರ ಮಕ್ಕಳು ರಂಗಕ್ಕೆ ಬರಲಿಲ್ಲ. ಮೊಮ್ಮಕ್ಕಳ ಕಾಲಕ್ಕೆ ಇದು ಮತ್ತೆ ಚಲನಶೀಲತೆ ಕಂಡುಕೊಂಡಿದೆ.

ಹೀಗಾಗಿ ರಾಮ-ಲಕ್ಷ್ಮಣರಿಂದ ಬಂದ ಶೈಲಿಯನ್ನು ಸಮಗ್ರವಾಗಿ ಅವಲೋಕಿಸಲು ಸಾಧ್ಯವಿಲ್ಲ. ಅವರು ರಂಗದಲ್ಲಿದ್ದ ಸಂದರ್ಭದ ಯಾವ ಡಾಕ್ಯುಮೆಂಟರಿಯೂ ಲಭ್ಯವಿಲ್ಲ. ವಿಭಿನ್ನ ವೇಷಗಳ ಛಾಯಾಚಿತ್ರಗಳೂ ಇಲ್ಲ. ಆದರೆ ಕೊಂಡದಕುಳಿ ಅವಳಿ ಸಹೋದರರು ಗತ್ತು, ಗಾಂಭೀರ್ಯದ ಪಾತ್ರಗಳಿಗೆ ಜೀವ ತುಂಬಿದ್ದರು. ವೈಯಕ್ತಿಕ ಬದುಕಿನಲ್ಲೂ ಆದರ್ಶದ ಪ್ರತಿರೂಪವಾಗಿದ್ದ ಪ್ರಜ್ಞಾವಂತ ಕಲಾವಿದರಾಗಿದ್ದರು. ರಂಗದ ಗುಣಾತ್ಮಕ ಬೆಳವಣಿಗೆಗೆ ಸಹಕಾರಿಯಾದರೆಂದು ಮುಕ್ತ ಮನಸ್ಸಿನಿಂದ ಹೇಳಬಹುದು.

ರಾಮ ಹೆಗಡೆ ಮೊಮ್ಮಗ, ರಾಮಚಂದ್ರ ಹೆಗಡೆ ಕೊಂಡದಕುಳಿ ಯಕ್ಷಗಾನದಲ್ಲಿ ಯಾವ ಪಾತ್ರವನ್ನೂ ಮಾಡಬಲ್ಲ ಉತ್ಕೃಷ್ಟ ಕಲಾವಿದ. ಲಕ್ಷ್ಮಣ ಹೆಗಡೆ ಮೊಮ್ಮಕ್ಕಳೂ ಹವ್ಯಾಸಿ ವೇಷಧಾರಿ ಗಳಾಗಿ, ತಾಳಮದ್ದಲೆಯ ಅರ್ಥಧಾರಿಗಳಾಗಿ ಯಶ ಕಾಣುತ್ತಿದ್ದಾರೆ. ಆಧುನಿಕ ಸೌಕರ್ಯದ ಗಾಳಿಯೂ ಸೋಂಕದ ಕಾಲದಲ್ಲಿ ಯಕ್ಷಗಾನಕ್ಕಾಗಿ ಜೀವ ತೇಯ್ದ ಅಜ್ಜಂದಿರ ಶ್ರಮ ಮೊಮ್ಮಕ್ಕಳ ಮೂಲಕ ಸಾರ್ಥಕತೆಯೆಡೆಗೆ ಸಾಗುತ್ತಿದೆ.

ಶತಮಾನ ಸಂಭ್ರಮ

ದಿ. ರಾಮ-ಲಕ್ಷ್ಮಣ ಹೆಗಡೆ ಕೊಂಡದಕುಳಿ ಸಹೋದರರ ಜನ್ಮ ಶತಮಾನೋತ್ಸವ ಸಮಾರಂಭವು ಈ ತಿಂಗಳ ೫ ರಂದು ಶನಿವಾರ, ಉಡುಪಿ ರಾಜಾಂಗಣದಲ್ಲಿ ನಡೆಯಲಿದೆ. ರಾಮಚಂದ್ರ ಹೆಗಡೆ ನೇತೃತ್ವದ ಪೂರ್ಣಚಂದ್ರ ಮಂಡಳಿಯ ದಶಮಾನ ಸಂಭ್ರಮವೂ ಇದರೊಂದಿಗೆ ಇದೆ. ಅಜ್ಜಂದಿರ ನೆನಪಿನ ಸ್ಮರಣ ಸಂಚಿಕೆಯೂ ಸಾಂಕೇತಿಕವಾಗಿ ಬಿಡುಗಡೆಯಾಗಲಿದೆ. ಮಧ್ಯಾಹ್ನ ೩ ಕ್ಕೆ ಕಾರ್ಯಕ್ರಮ ಆರಂಭ.
(ವಿಕ ಲವಲವಿಕೆಯಲ್ಲಿ ಪ್ರಕಟವಾದ ಲೇಖನ)

ಹಡಗಿನ ಬಾಗಿಲಿನ ಸ್ವಾಭಿಮಾನಿ ಕಲಾವಿದ

ಕಂದ್ದನ್ನು ಕಂಡ ಹಾಗೆ ಖಡಕ್ ಆಗಿ ಹೇಳುವ ನಿಷ್ಠುರವಾದಿ. ಆತ್ಮಾಭಿಮಾನಕ್ಕೆ ಪೆಟ್ಟು ಕೊಡುವ ಮಾತನ್ನು ಯಾರೇ ಆಡಿದರೂ ಸಹಿಸುವ ಜಾಯಮಾನದವರಲ್ಲ. ಸಹೃದಯಿ. ಭಾವಜೀವಿ. ಎಲ್ಲಕ್ಕಿಂತ ಮುಖ್ಯವಾಗಿ ಕೊಟ್ಟ ಪಾತ್ರವನ್ನು ಅತ್ಯಂತ ಚೊಕ್ಕದಾಗಿ ನಿರ್ವಹಿಸುವ ಪ್ರಾಮಾಣಿಕ.

ಯಕ್ಷಗಾನ ಕಲಾವಿದ ಹಡಿನಬಾಳು ಶ್ರೀಪಾದ ಹೆಗಡೆ ಅವರ ವ್ಯಕ್ತಿತ್ವಕ್ಕೆ ಇದಕ್ಕಿಂತ ಹೊರತಾದ ಚೌಕಟ್ಟು ಕಟ್ಟಲು ಸಾಧ್ಯವಾಗುವುದಿಲ್ಲ. ಉತ್ತರ ಕನ್ನಡದ ಹೊನ್ನಾವರ ತಾಲೂಕಿನಲ್ಲಿ ಬ್ರಿಟೀಷರ ಕಾಲದಲ್ಲಿ ‘ಹಡಗಿನ ಬಾಗಿಲು’ ಎಂದಿದ್ದ ಊರು ವ್ಯತ್ಯಸ್ಥಗೊಂಡು ಹಡಿನಬಾಳು ಆಗಿದೆ. ಈ ಕಡಲ ಕಿನಾರೆಯಿಂದ ಬಂದಿರುವ ಶ್ರೀಪಾದ ಹೆಗಡೆ ಅವರದ್ದು ಯಕ್ಷಗಾನದಲ್ಲಿ ಅಲೆ ಎಬ್ಬಿಸಿದ ಜನಪ್ರಿಯ ಹೆಸರಲ್ಲ. ಆದರೆ, ಅವರು ‘ಜನ ಪ್ರೀತಿ’ ಗಳಿಸಿದ ಕಲಾವಿದ.

ರಂಗಸ್ಥಳದಲ್ಲಿ ಸ್ವರ್ಣ ವರ್ಣ ಲೇಪಿತ ವೇಷಭೂಷಣದಿಂದ ಶೋಭಿಸುವ ಶ್ರೀಪಾದ ಹೆಗಡೆ, ನಿಜ ಜೀವನದಲ್ಲಿ ಬಡತನದ ಬೇಗೆಯಲ್ಲಿ ಬೆಂದಿದ್ದಾರೆ. ಅದನ್ನು ಎಲ್ಲಿಯೂ ಹೇಳಿಕೊಂಡವರೂ ಅಲ್ಲ. ಬದುಕು ಸಾಗಿಸಲು ಯಕ್ಷಗಾನದೊಟ್ಟಿಗೆ ಹೊಲಿಗೆ, ವೀಳ್ಯದ ಎಲೆ ವ್ಯಾಪಾರ, ಕೊಡೆ ರಿಪೇರಿ, ಗಣಪತಿ ಮೂರ್ತಿ ಮಾಡುವ ವೃತ್ತಿಯನ್ನೂ ಅಪ್ಪಿಕೊಂಡಿದ್ದಾರೆ.

ಕಲಾವಿದರಾಗಿ ಶ್ರೀಪಾದ ಹೆಗಡೆ ಗಟ್ಟಿ ಪ್ರತಿಭೆ. ಕೆರೆಮನೆ ಮಹಾಬಲ ಹೆಗಡೆ ಅವರಂತಹ ಮೇರು ನಟರಲ್ಲಿ ವಿದ್ಯಾರ್ಥಿಯಾಗಿ ಅಭ್ಯಾಸ ಮಾಡಿದ್ದಾರೆ. ಮಹಾಬಲ ಹೆಗಡೆ ಪ್ರಭಾವವು ಪ್ರತ್ಯಕ್ಷ, ಪರೋಕ್ಷವಾಗಿ ಅನೇಕ ಕಲಾವಿದರ ಮೇಲೆ ಆಗಿದೆ. ಆದರೆ, ಈಗಲೂ ಮಹಾಬಲರನ್ನು ಮಾತಾಡಿಸಿದರೆ, ‘ಹಡಿನಬಾಳು ಶ್ರೀಪಾದ ನನ್ನ ವಿದ್ಯಾರ್ಥಿ’ ಎಂದು ಮೆಚ್ಚುಗೆಯ ಪ್ರಶಸ್ತಿ ಕೊಡುತ್ತಾರೆ. ಇದು ಹಡಿನಬಾಳರಿಗೆ ಸಲ್ಲುವ ದೊಡ್ಡ ಗೌರವವೇ ಸರಿ. ಮುನ್ನುಗ್ಗುವ, ಓಲೈಸುವ ಸ್ವಭಾವಕ್ಕೆ ಕಟ್ಟು ಬೀಳದಿರುವುದರಿಂದ ಅದೆಷ್ಟೋ ಅವಕಾಶದಿಂದ ವಂಚಿತರಾಗಿದ್ದೂ ನಿಜ.

ಅಜಾನುಬಾಹು ಹಡಿನಬಾಳು ಧೈತ್ಯ, ದಾನವ ವೇಷಗಳಿಗೆ ಹೇಳಿ ಮಾಡಿಸಿದಂತಹ ಕಲಾವಿದ. ಸಾತ್ವಿಕ ಪಾತ್ರಗಳನ್ನೂ ಸಮರ್ಥವಾಗಿಯೇ ತೂಗಿಸುತ್ತಾರೆ. ಕೃಷ್ಣ ಸಂಧಾನದ ಶ್ರೀಪಾದರ ಕೌರವ, ಸುಭದ್ರಾ ಕಲ್ಯಾಣದ ಬಲರಾಮ, ದಮಯಂತಿ ಪುನಃಸ್ವಯಂವರದ ಋತುಪರ್ಣನಂತಹ ಪಾತ್ರಗಳು ಬಹಾಬಲರು ಹಾಕಿ ಕೊಟ್ಟ ನಡೆಯಲ್ಲೇ ಇರುತ್ತವೆ. ಗದಾಯುದ್ಧದ ಭೀಮ, ಕಾರ್ತವೀರ್ಯಾರ್ಜುನದ ರಾವಣ, ಕೀಚಕವಧೆಯ ವಲಲ, ಕರ್ಣಪರ್ವದ ಶಲ್ಯ, ಶರಸೇತು ಬಂಧನದ ಅರ್ಜುನ, ವಾಲಿವಧೆಯ ವಾಲಿಯ ಪಾತ್ರಗಳು ಕಲಾಸಕ್ತರ ಚಿತ್ತಭಿತ್ತಿಯಲ್ಲಿ ಅಚ್ಚೊತ್ತಿವೆ. ಹನುಮಂತ, ಅಶ್ವತ್ಥಾಮ, ರಕ್ತಜಂಘ ಸೇರಿದಂತೆ ಹಲವು ಪಾತ್ರಗಳೂ ಇವರದ್ದೇ ಆದ ರೀತಿಯಲ್ಲಿ ಇವೆ.

ಬಣ್ಣಗಾರಿಕೆ, ಮುಖವರ್ಣಿಕೆಯಲ್ಲೂ ಹಡಿನಬಾಳು ವಿಶೇಷ ಪ್ರಾವೀಣ್ಯ ಹೊಂದಿದ್ದಾರೆ. ಅರ್ಥಗಾರಿಕೆಯಲ್ಲಿ ವೈಚಾರಿಕತೆ ಇದೆ. ಶರಾವತಿಯ ಮತ್ತೊಂದು ದಡದ ಮಾಳ್ಕೋಡು, ಶ್ರೀಪಾದರ ಮೂಲ ಊರು. ಯಕ್ಷಗಾನದ ಮುಕ್ತ ವಿಶ್ವವಿದ್ಯಾಲಯದಂತಿರುವ ಗುಂಡಬಾಳದಲ್ಲೇ ಪ್ರಥಮವಾಗಿ ಗೆಜ್ಜೆ ಕಟ್ಟಿದ್ದಾರೆ. ಮೊದಲ ವೇಷ ಹಾಸ್ಯಗಾರನದ್ದು. ಆಗ ಮಹಾಬಲ ಹೆಗಡೆಯವರೇ ‘ಹಾಸ್ಯ ಮಾಡಿ ಆಯುಷ್ಯ ಹಾಳು ಮಾಡಿಕೊಳ್ಳಬೇಡ’ ಎಂದು ಗದರಿಸಿ ಮನೆಗೆ ಕರೆದು ಹೆಜ್ಜೆ ಕಲಿಸಿದರಂತೆ.

ಹಡಿನಬಾಳರ ಮೇಲೆ ವಿಶ್ವಾಸ ಮೂಡಿದ ದಿನ ಮಹಾಬಲ ಹೆಗಡೆ, ‘ನಾನು ಹೇಳಿದರೆ ನಿನ್ನನ್ನು ಯಾವ ಮೇಳದವರೂ ಸೇರಿಸಿಕೊಳ್ಳುತ್ತಾರೆ. ಹೊರಟು ಬಿಡು’ ಎಂದಾಗ ‘ಹಾಗೆಲ್ಲ ಮೇಳಕ್ಕೆ ಹೋಗಿ ನಿಮ್ಮ ಹೆಸರು ಕೆಡಿಸಲಾರೆ’ನೆಂದು ನಯವಾಗಿ ಒಲ್ಲೆ ಎಂದಿದ್ದನ್ನು ಶ್ರೀಪಾದ ಹೆಗಡೆ ನೆನಪು ಮಾಡಿಕೊಳ್ಳುತ್ತಾರೆ. ನಂತರ ಸ್ವಂತ ಸಾಮರ್ಥ್ಯದಿಂದಲೇ ಬಡಗುತಿಟ್ಟಿನ ಪ್ರಮುಖ ಮೇಳಗಳಲ್ಲಿ ವೇಷ ಮಾಡಿದ್ದಾರೆ. ಈ ವರ್ಷ ಪೆರ್ಡೂರು ಮೇಳಕ್ಕೆ ಸೇರ್ಪಡೆಗೊಂಡು ಪ್ರಧಾನ ವೇಷಧಾರಿಯಾಗಿ ಬಡ್ತಿ ಪಡೆದಿದ್ದಾರೆ. ಅದು ಅವರಿಗೆ ಯಶಸ್ಸು ತರಲೆಂದು ಅಪೇಕ್ಷಿಸೋಣ.
(೨೦೦೯ ರ ಜುಲೈ ೫ ರಂದು ಎಡಿಎ ರಂಗಮಂದಿರದಲ್ಲಿ ಶ್ರೀಪಾದ ಹೆಗಡೆ ಅಭಿನಂದನೆ ಸಂದರ್ಭದಲ್ಲಿ ವಿಕದಲ್ಲಿ ಪ್ರಕಟಗೊಂಡ ಲೇಖನ)

ಮಹಾಬಲರಿಗೆ ಅಕ್ಷರಾಂಜಲಿ...


ಭೈರವೇಶ್ವರ ಶಿಖರದ ಮತ್ತೊಂದು ಮುಕುಟವೂ ಕಳಚಿತು

ಭೈರವೇಶ್ವರ ಶಿಖರದ ಮತ್ತೊಂದು ಮುಕುಟ ಕಳಚಿ ಬಿದ್ದಿದೆ. ಕೆರೆಮನೆ ಮಹಾಬಲ ಹೆಗಡೆ ಭೌತಿಕ ಪ್ರಪಂಚ ತೊರೆಯುವ ಮೂಲಕ ಯಕ್ಷಲೋಕದ ತುರಾಯಿಯೇ ಜಾರಿ ಹೋಗಿದೆ.

ಯಾಣದ ಭೈರವೇಶ್ವರ ಶಿಖರದಂತೆ ಯಕ್ಷಗಾನದಲ್ಲಿ ಇದ್ದವರು ಕೆರೆಮನೆ ಸಹೋದರರಾದ ಮಹಾಬಲ ಹೆಗಡೆ, ಶಂಭು ಹೆಗಡೆ. ಇಡಗುಂಜಿಯ ವಿನಾಯಕ ದೇವರ ಸನ್ನಿಯಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸುತ್ತಿದ್ದಾಗಲೇ ಶಂಭು ಹೆಗಡೆ, ಈ ಲೋಕದ ಯಾತ್ರೆ ಮುಗಿಸಿದ್ದರು. ಈ ದುಃಖ ಮಾಸುವ ಮುನ್ನವೇ ಮಹಾಬಲರೂ ಹೊರಟು ಹೋಗಿರುವುದು ದೊಡ್ಡ ಆಘಾತ.

ಯಕ್ಷರಂಗ ಒಪ್ಪಿ ಅಭಿಮಾನದಿಂದ ಬೀಗಿದಂತೆ ಮಹಾಬಲ ಹೆಗಡೆ ನಿಜಾರ್ಥದಲ್ಲಿ ‘ಯಕ್ಷಗಾನದ ಮಹಾಬಲ’ರೇ ಆಗಿದ್ದರು. ಅದು ಅವರ ಚಿಕ್ಕಪ್ಪ, ಸರ್ವೋತ್ಕೃಷ್ಟ ನಟ ದಿ. ಶಿವರಾಮ ಹೆಗಡೆ ಕಾಲದಲ್ಲೇ ಸಂದ ಬಿರುದಾಗಿತ್ತು. ಮುಮ್ಮೇಳ, ಹಿಮ್ಮೇಳಗಳೆರಡನ್ನೂ ಅರಿತು ರಾಗ, ತಾಳಗಳ ಬಗ್ಗೆ ಖಚಿತ ಜ್ಞಾನವಿದ್ದ ಏಕೈಕ ಕಲಾವಿದ ಮಹಾಬಲ ಹೆಗಡೆ. ಶ್ರುತಿಬದ್ಧವಾಗಿ ಹಾಡಿಕೊಂಡೇ ಅಭಿನಯಿಸಿ ಅರ್ಥ ಹೇಳುವುದು ಅವರಿಗಷ್ಟೆ ಸಿದ್ಧಿಸಿತ್ತು. ಹಿಂದೂಸ್ಥಾನಿಯ ಸಂಪರ್ಕದಿಂದಾಗಿ ಭಾಗವತಿಕೆಯಲ್ಲಿ ರಾಗದ ಖಚಿತತೆ ಬಯಸುತ್ತಿದ್ದರು. ಅದಕ್ಕಾಗಿಯೇ ಅವರಿಗೆ ಎಂತಹ ಭಾಗವತ ಹಾಡಿದರೂ ಸರಿ ಬರುತ್ತಿರಲಿಲ್ಲ. ಕಡು ನಿಷ್ಠುರವಾಗಿಯೇ ನಡೆದುಕೊಳ್ಳುತ್ತಿದ್ದರು.

ಎಳವೆಯಲ್ಲಿ ಮಹಾಬಲ ಕಿಲಾಡಿ ಪೋರ. ಆಲೆಮನೆಯ ಬೆಲ್ಲದ ಕೊಪ್ಪರಿಗೆಯಲ್ಲಿ ಉಚ್ಚೆ ಹೊಯ್ದ ತುಂಟ. ಈ ಮಾಣಿ ಫಟಿಂಗ ಆಗುವುದು ಬೇಡವೆಂದು ಶಿವರಾಮ ಹೆಗಡೆ ರಂಗಕ್ಕೆ ತಂದರಂತೆ. ನಂತರ ಚಿಕ್ಕಪ್ಪನ ನೆರಳಿನಲ್ಲೇ ಬೆಳೆದ ಮಹಾಬಲ, ಸ್ವಂತ ಪರಿಶ್ರಮದಿಂದಲೇ ಎತ್ತರಕ್ಕೆ ಏರಿದರು. ಶಾಲೆ ವಿದ್ಯಾಭ್ಯಾಸ ಕಡಿಮೆಯಾದರೂ ರಂಗದ ಕುರಿತಾದ ಅಧ್ಯಯನದಿಂದ ವೈಚಾರಿಕ ಸಂಪನ್ನರಾದರು. ಇದಕ್ಕೆ ಅವರ ಪಾತ್ರಗಳು ಆಡುತ್ತಿದ್ದ ಮಾತುಗಳೇ (ಅರ್ಥಗಾರಿಕೆ) ಸಾಕ್ಷಿ. ರಂಗಕ್ಕೆ ಒಗ್ಗುವ ಹಾಗೆ ಪ್ರಾದೇಶಿಕ ಪದಗಳ (ಗ್ರಾಮೀಣ/ ಗಾಂವಟಿ ಶಬ್ದ) ಬಳಕೆ ಮಹಾಬಲ ಹೆಗಡೆ ಶೈಲಿ ವೈಶಿಷ್ಟ್ಯ. ಇದನ್ನೇ ಇನ್ನೊಬ್ಬರು ಹೇಳಿದರೆ ಕೇಳಲು ಹಿತವಲ್ಲ.

ಉದಾಹರಣೆಗೆ ಕರ್ಣಪರ್ವದ ಶಲ್ಯನಾಗಿ ಕೃಷ್ಣನೊಂದಿಗೆ ಸಂಭಾಷಿಸುವಾಗ, ‘ಮರ ಹತ್ತುವವರು ಮೀನು ಹಿಡಿಯಬಾರದು. ಮೀನು ಹಿಡಿಯುವವರು ಮರ ಹತ್ತಬಾರದು’ ಎಂದು ಮಹಾಬಲರು ಹೇಳುತ್ತಿದ್ದರು. ಇದು ವೃತ್ತಿ ಮತ್ತು ಪ್ರವೃತ್ತಿಯ ವಿಶ್ಲೇಷಣೆ ಮಾಡುತ್ತ ತಿಳಿಹಾಸ್ಯದಿಂದ ಅವರು ಆಡಿದರೇ ಚೆಂದ. ಗನಗಾಂಪ, ಶುದ್ಧ ಟೊಣಪನಂತಹ ಪದಗಳನ್ನೂ ಬಳಸುತ್ತಿದ್ದರು. ಪರ್ವದ ಭೀಷ್ಮನಾಗಿ ಸಿಟ್ಟಿಗೆದ್ದ ಕೃಷ್ಣನನ್ನು ತಣಿಸುವಾಗ ‘ಸ್ವಲ್ಪ ಏರುಪಾಕ ಆಯಿತೋ ಹ್ಯಾಗೆ’ ಎನ್ನುತ್ತ ಛೇಡಿಸುತ್ತಿದ್ದರು. ಅಂದರೆ ಇಂಥ ಅನೇಕ ಪದಪುಂಜವನ್ನು ಯಕ್ಷಗಾನೀಯವಾಗಿ ಕಟ್ಟಿ ಕೊಡುವುದು ಅವರಿಗೆ ಮಾತ್ರ ಸಾಧ್ಯವಿತ್ತು. ಹೊಂಬಾಣ ದೀವಿಗೆ ಹಿಡಿದು ಅರ್ಧರಾತ್ರಿಯಲ್ಲಿ ತನ್ನ ಆಲಯಕ್ಕೆ ಬಂದ ಸುಯೋಧನನ್ನು ಕಂಡ ಮಹಾಬಲರ ಭೀಷ್ಮ, ಯಾರು ಎಂದು ಪ್ರಶ್ನಿಸಿ ‘ಮೇದಿನಿಪ ಬಾ ಎನುತ ...’ ಪದ್ಯದ ಎತ್ತುಗಡೆಗೆ ತೊಡಗಿದಾಗ ಎದೆ ಝಲ್ಲೆನ್ನುತ್ತಿತ್ತು. ವಿಜಯದ ಭೀಷ್ಮನಾಗಿ ‘ಸುತ್ತಲು ನೋಡುತ ಗಂಗಾ ತರಳನು’ ಎಂದು ದಿಟ್ಟಿಸಿದರೆ ಚಂಡ ಮಾರುತವೇ ಅಪ್ಪಳಿಸಿದಂತಾಗುತ್ತಿತ್ತು. ಸಂಧಾನದ ಕೌರವ, ಸುಭದ್ರಾ ಕಲ್ಯಾಣದ ಬಲರಾಮ, ರಕ್ತರಾತ್ರಿಯ ಅಶ್ವತ್ಥಾಮನಂತಹ ಮಹಾಬಲರ ಪಾತ್ರಗಳು ಮತ್ತೊಬ್ಬರಿಗೆ ಒಲಿದಿಲ್ಲ. ಅವರಿಂದ ಕಲಿತವರು ಅಷ್ಟನ್ನೇ ಮಾಡಿ ತೋರಿಸುವುದಕ್ಕೆ ಸೀಮಿತರಾಗಿದ್ದಾರೆ. ಹೊಸ ಮಾದರಿ ಸೃಷ್ಟಿ ಆಗಿಲ್ಲ.

ಮಹಾಬಲ ಹೆಗಡೆ ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದವರು. ಆದರೆ, ಸಂಜೆ ವೇಳೆ ಮನೆಯಲ್ಲಿ ಕುಳಿತು ಎಲೆಕ್ಟ್ರಾನಿಕ್ ಶ್ರುತಿ ಪೆಟ್ಟಿಗೆ ಇಟ್ಟುಕೊಂಡು ಹಾಡುವುದನ್ನು ಬಿಟ್ಟಿರಲಿಲ್ಲ. ಆಸಕ್ತರು ಹೋಗಿ ಮಾತಾಡಿಸಿದರೆ, ಕೊಂಚ ಹೊತ್ತಿನಲ್ಲಿ ಹಳೆಯ ನೆನಪಿಗೆ ಜಾರಿ ಲಹರಿಗೆ ಬರುತ್ತಿದ್ದರು. ತಮ್ಮಲ್ಲಿರುವ ಅನೇಕ ಸಂಗತಿಯನ್ನು ಮುಂದಿನ ತಲೆಮಾರಿಗೆ ಕೊಡಲು ಆಗಲಿಲ್ಲವೆಂಬ ಕೊರಗು ಅವರನ್ನು ಕಾಡುತ್ತಿತ್ತು. ಮಹಾಬಲ ಹೆಗಡೆ, ಶಂಭು ಹೆಗಡೆ ಜೋಡಿ ಯಕ್ಷಗಾನದಲ್ಲಿ ದಾಖಲಾದ ಅಮೃತ ಗಳಿಗೆ. ಶಂಭು ಹೆಗಡೆ ನಿಧರಾದಾಗಲೂ ತಮ್ಮ ಪುತ್ರ ರಾಮ ಹೆಗಡೆ ಮನೆ, ಅಳಿಕೆಯಲ್ಲಿ ಮಹಾಬಲರು ಇದ್ದರು. ತಮಗಿಂತ ಸುಮಾರು ೧೨ ವರ್ಷ ಕಿರಿಯ ಸಹೋದರ ಇಲ್ಲ ಎನ್ನುವುದನ್ನು ಅವರು ಒಪ್ಪಿಕೊಂಡೇ ಇರಲಿಲ್ಲ. ಈಗ ಅವರೂ ಕಾಲನ ಕರೆಯಾಲಿಸಿ ತೆರಳುವುದರೊಂದಿಗೆ ಶುದ್ಧ ಸೊಗಡಿನ, ಶಿಷ್ಟ ಸೊಬಗಿನ ಯಕ್ಷಗಾನದ ಅಭಿರುಚಿ ಮೂಡಿಸಿದ ಜೋಡಿ ಕಲಾ ಕ್ಷಿತಿಜದಿಂದ ಮರೆಯಾಗಿದೆ.

ಶಂಭು ಹೆಗಡೆ ತೀರಿಕೊಂಡಿದ್ದು ಇಡಗುಂಜಿ ತೇರಿನ ದಿನ ರಥ ಸಪ್ತಮಿಯಂದು. ಮಹಾಬಲ ಹೆಗಡೆ ಏಕಾದಶಿಯ ಶುಭ ಸಂದರ್ಭದಂದು ವೈಕುಂಠದತ್ತ ಪ್ರಯಾಣ ಬೆಳೆಸಿದ್ದಾರೆ. ಇದೂ ಒಂದು ಸುಯೋಗವೆಂದೇ ಭಾವಿಸೋಣ. ಕಲೆಯ ಉನ್ನತ ಮೌಲ್ಯದ ಪ್ರತಿಪಾದಕರಾದ ‘ಮಹಾಬಲ’ರಿಗೆ ಸದ್ಗತಿ ದೊರಯಲೆಂದು ನೆನೆಸುತ್ತ ಈ ಅಕ್ಷರಾಂಜಲಿ.
(ಮಹಾಬಲ ಹೆಗಡೆ ನಿಧನರಾದ ದಿನ ೨೯-೧೦-೨೦೦೯ ರಂದು ವಿಜಯ ಕರ್ನಾಟಕಕ್ಕಾಗಿ ಬರೆದಿದ್ದ ನುಡಿನಮನ)

ಅಂಗನಾಮಣಿ ಮನ ಮೋಹಿನಿ


ನದಿಯೊಂದು ಜಲಪಾತವಾಗಿ ಧುಮ್ಮಿಕ್ಕಿದರೆ ಅದು ರೋಮ ಹರ್ಷಕ ಅನುಭವವೀಯುವ ಅಬ್ಬರ. ಅದೇ ನದಿ ಹಸಿರ ಕಣಿವೆಯ ಕೊರಕಲಿನಲ್ಲಿ ಪ್ರವಹಿಸಿದರೆ ಅದೊಂದು ದೃಶ್ಯ ವೈಭವ. ಯಾವುದೋ ತಿರುವಿನಲ್ಲಿ ತೊರೆಯ ಒಡಲು ಬರಿದಾದರೆ ರಸಭಂಗವಾದಂತೆ.

ರಂಗಸ್ಥಳದಲ್ಲೂ ಹಾಗೆಯೇ. ಪಾತ್ರವೊಂದು ಮೊಳಕೆಯೊಡೆದು ತುರೀಯಾವಸ್ಥೆ ತಲುಪಲು ವಿಭಿನ್ನ ರಸಘಟ್ಟ ಕ್ರಮಿಸಬೇಕಾಗುತ್ತದೆ. ಯಕ್ಷಗಾನದಭಸ್ಮಾಸುರ ಮೋಹಿನಿಆಖ್ಯಾನದ ಮೋಹಿನಿಯ ಪಾತ್ರದ ಪ್ರವೇಶ ಭೋರ್ಗರೆವ ಜಲಪಾತದಂತೆ. ಮೋಹಿನಿ ಶ್ರೀಹರಿಯ ವೇಷಾಂತರ. ಭಸ್ಮಾಸುರನನ್ನು ಮರುಳು ಮಾಡಿ ಕೊಲ್ಲುವುದೇ ಮೋಹಕ ರೂಪಿ ಮೋಹಿನಿಯ ತಂತ್ರ.

ಪ್ರಸಂಗದ ಪೂರ್ವಾರ್ಧದಲ್ಲಿ ಮೋಹಿನಿಯ ಪ್ರವೇಶವಾಗುತ್ತದೆ. ಚೆಲ್ಲು ಚೆಲ್ಲಾಗಿ ಆಡುವುದು, ಸೌಂದರ್ಯಾತಿಶಯದಿಂದ ಬೀಗುವುದೇ ಈಕೆಯ ಸ್ವಭಾವ. ಒಂದರ್ಥದಲ್ಲಿ ಶೃಂಗಾರವೇ ವಿಜೃಂಭಿಸಬೇಕು. ನರ್ತನದಲ್ಲಂತೂ ಮೈಮರೆಸಲೇಬೇಕು. ಯಕ್ಷಗಾನದಲ್ಲಿ ಪುರುಷರೇ ಸ್ತ್ರೀವೇಷ ಮಾಡುವುದು ರೂಢಿ. ಹೀಗಾಗಿ ಮೋಹಿನಿಯಾಗಿ ಮೋಡಿಗೈಯ್ಯಲು ಅಂತಹ ಪ್ರತಿಭಾಸಂಪನ್ನರೇ ಇರಬೇಕಾಗುತ್ತದೆ.

ಮಾರ್ಚ್ ೧೫ ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಹಾಸ್ಯಗಾರ ರಮೇಶ ಭಂಡಾರಿ ಸಹಾಯಾರ್ಥ ಪ್ರದರ್ಶನದಲ್ಲಿ ಆಖ್ಯಾನವಿತ್ತು. ಮೋಹಿನಿಯಾಗಿ ಅಭಿನಯಿಸಿದವರು ಮೋಹಕ ಸ್ತ್ರೀವೇಷಧಾರಿಯೇ ಆದ ಯಲಗುಪ್ಪ ಸುಬ್ರಹ್ಮಣ್ಯ. ಇವತ್ತಿನ ಸಂದರ್ಭದಲ್ಲಿ ಮೋಹಿನಿಯಂಥ ಪಾತ್ರವನ್ನು ಯಲಗುಪ್ಪ ಮಾತ್ರ ಸಮರ್ಥವಾಗಿ ಅರಳಿಸಬಲ್ಲರು. ಅದಕ್ಕೇ ಅವರು ಅಂದಿನ ಪ್ರದರ್ಶನದ ಕೇಂದ್ರವಾಗಿದ್ದರು. ನಿರೀಕ್ಷೆಯಂತೆ ಮತ್ತೊಮ್ಮೆಮನ ಮೋಹಿನಿಯೇ ಆದರು.

ಬಂದಳಾಗ ಮೋಹಿನಿಯು ಆನಂದದಿ, ಎಲ್ಲೆಲ್ಲು ಸೊಬಗಿದೆ... ಸೇರಿ ಎಲ್ಲ ಪದ್ಯಗಳಿಗೂ ಕುಣಿದು ದಣಿದು ಸಮ್ಮೋಹನಗೊಳಿಸಬಲ್ಲವರು ಯಲಗುಪ್ಪ. ಯಕ್ಷಗಾನೀಯ ವಲಯದವರಲ್ಲದವರು ಕಲಾವಿದನ ಸ್ತ್ರೀವೇಷ ಕಂಡರೆ ಹೆಣ್ಣೆಂದೇ ಭಾವಿಸುತ್ತಾರೆ. ನೈಜ ಸಂಗತಿ ಅರಿತಾಗ ಚಕಿತರಾಗಿ ಹೌದಾ.. ಎಂದು ಉದ್ಗರಿಸಿದ ಎಷ್ಟೋ ನಿದರ್ಶನಗಳಿವೆ. ದಿಗಡದಿಮ್ಮಿಯಂಥ ವೇಷದಷ್ಟೇ ಸಮರ್ಥವಾಗಿ ಭಾವ ಪ್ರಧಾನ ಪಾತ್ರಗಳಲ್ಲೂ ಗೆಲ್ಲುವ ಅರ್ಹತೆ ಯಲಗುಪ್ಪ ಅವರಿಗೆ ಉಂಟು.

ವೃತ್ತಿ ಮೇಳಕ್ಕೆ ಕಾಲಿಟ್ಟ ಹೊಸತರಲ್ಲಿ ಇದೇ ಯಲಗುಪ್ಪ ಮೇಲೆ ಭರವಸೆ ಇಟ್ಟವರು ಕಡಿಮೆ. ಆದರೆ, ಕಠಿಣ ಪರಿಶ್ರಮದಿಂದ ಹಂತಕ್ಕೆ ಬೆಳೆದರು. ಸುಬ್ರಹ್ಮಣ್ಯ ಅವರಿಗೆ ಲಯದ ಮೇಲಿನ ಅದ್ಭುತ ಹಿಡಿತದ ಸಿದ್ಧಿಯಿದೆ. ಶ್ರುತಿಬದ್ಧವಾಗಿ ಹಾಡಿಕೊಳ್ಳುವ, ಹಿಮ್ಮೇಳವನ್ನು ಹೊಂದಾಣಿಕೆ ಮಾಡಿಕೊಂಡು ಸಾಗುವ ಜಾಣ್ಮೆಯಿದೆ. ಭರತನಾಟ್ಯ, ಹಿಂದೂಸ್ತಾನಿ ಸಂಗೀತದ ಅಭ್ಯಾಸವೂ ಇದೆ. ವಾಚಿಕಾಂಗದಲ್ಲೂ ಮೇಲ್ಮೆಯಿದೆ. ಮೋಹಿನಿ, ಮೇನಕೆಯಂಥ ಪಾತ್ರಗಳಲ್ಲಿ ಶಿಲ್ಪ ಸುಂದರಿಯೇ ಆಗುತ್ತಾರೆ. ಅದಕ್ಕೆ ಸಹವರ್ತಿಯಾಗಿ ಅವರ ದೇಹ ಬಾಗುತ್ತದೆ. ಬಳುಕುತ್ತದೆ. ಹಾವ, ಭಾವ, ಒನಪು, ವೈಯ್ಯಾರದಿಂದ ಸ್ತ್ರೀ ಸಹಜ ಗುಣಲಕ್ಷಣಗಳನ್ನು ಮೈಗೂಡಿಸಿ ಅಭಿನಯಿಸುತ್ತಾರೆ. ಹದಿನಾರರ ಸೊಕ್ಕಿದ ಅಂಗನೆಯಂತೆಕೊಮಣೆಮಾಡೋದೂ ಗೊತ್ತು.

ನಮ್ಮ ಚೋಳ (ಕಂಚಿನ ಶಿಲ್ಪ), ಹೊಯ್ಸಳ ಇತ್ಯಾದಿ ಶಿಲ್ಪ ಕೃತಿಗಳಿಗೆ ಸುರೇಖಾಕೃತಿಯೆನ್ನುತ್ತೇವೆ. ಸೌಂದರ್ಯ ಶಾಸ್ತ್ರದಲ್ಲೂ ಸರ್ವಾಂಗ ಭೂಷಿತ ಸ್ತ್ರೀ ಗೆ ಇದು ಉಪಮೆ. ಸರಳ, ಲಾಲಿತ್ಯಭರಿತ ರೇಖೆ ಇರುವಂಥಾದ್ದು ತೆರನ ಆಕೃತಿ. ಅದು ಎಲ್ಲಿಯೂ ಛಿದ್ರಗೊಳ್ಳುವುದಿಲ್ಲ. ಚಿತ್ರವು ಜೀವಂತ ಬಿಂಬವಾಗಿಯೂ ( ಡಿ ಇಮೇಜ್/ರೂಪಚಿತ್ರ) ಅನುಭೂತಿಗೆ ಬರುತ್ತದೆ. ಹೀಗಿರುವುದು ಕಾವ್ಯ ಕನ್ನಿಕೆಯೇ ಮೈವೆತ್ತ ಸುರೇಖಾಕೃತಿ. ಹೆಣ್ಣುಗಳಲ್ಲೇ ಅತಿಶಯ ವಿರಳ. ಯಕ್ಷರಂಗದಲ್ಲಿ ಸಂಪನ್ನತೆಯ ಸನಿಹ ಇರುವವರು ಯಲಗುಪ್ಪ. ಇದನ್ನು ಸಾಧ್ಯವಾಗಿಸ ಹೊರಟಿರುವುದು ಕಲಾವಿದನ ವಿನೀತ ಹುಡುಕಾಟ, ಕೌಶಲ್ಯ. ನೆಲೆಯಲ್ಲಿ ಯಲಗುಪ್ಪ ಯಕ್ಷರಂಗದಮಾದರಿ ಹೆಣ್ಣಾಗುವ ಹಾದಿಯಲ್ಲಿದ್ದಾರೆ. ಎಂದೆಂದಿಗೂ ಪ್ರಸ್ತುತವಾಗುವ ಭವಿತವ್ಯ ಅವರಿಗಿದೆ.

ಬಡಗಿನ ಪ್ರತಿಭೆ ಯಲಗುಪ್ಪ ಸುಬ್ರಹ್ಮಣ್ಯ ಉಭಯ ತಿಟ್ಟಿನ ಆಕರ್ಷಣೆಯೂ ಹೌದು. ಆದರೆ, ಬಡಗುತಿಟ್ಟಿನಲ್ಲೇ ನೆಲೆ ನಿಂತರೆ ಕಲಾವಿದ ಅಪೇಕ್ಷೆಯ ಎತ್ತರಕ್ಕೆ ಏರಿ ಬೆಳಗಬಲ್ಲರು. ಇದಕ್ಕಾಗಿ ನಿರಂತರ ಚೆಂದವಾಗಿ ವೇಷ ಮಾಡಿಕೊಳ್ಳಬೇಕು. ಯಕ್ಷಗಾನೀಯ ಆಭರಣ, ವಸನದ ಆಯ್ಕೆಯಲ್ಲಿ ಹೆಚ್ಚು ಶ್ರದ್ಧೆ ವಹಿಸಬೇಕು. ಶಿರೋಭೂಷಣದಿಂದ ಪಾದದ ವರೆಗೂ ವೇಷದ ಒಪ್ಪ, ಓರಣದ ಸೊಬಗು ಮುಕ್ಕಾಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ನದಿಯ ಚಲನಶೀಲತೆಗೆ ಕುಂದುಂಟಾದಂತೆ, ರಸಜ್ಞರ ಕಣ್ಣಿನ ನೋಟಕ್ಕೆ ಪೊರೆ ಆವರಿಸಿದಂತಾಗುತ್ತದೆ.
(ವಿಜಯ ಕರ್ನಾಟಕ ಸಂಸ್ಕೃತಿ ಸಿಂಚನದಲ್ಲಿ ಪ್ರಕಟವಾದ ಲೇಖನ. ಸ್ವಲ್ಪ ಜಾಸ್ತಿ ವಿಷಯ ಸೇರಿಸಲಾಗಿದೆ)

ಶಂಕರನ ಧ್ಯಾನ

ಪ್ರಾಯಶಃ ಚೌತಿ ಹಬ್ಬದ ಸಮಯವಿರಬೇಕು. ನನಗೆ ಶಿರಸಿಯ ಸಾರ್ವಜನಿಕ ಗಣಪತಿ ನೋಡುವ ಸಂಭ್ರಮ. ಅದಕ್ಕೆಂದು ಕರೆದುಕೊಂಡು ಹೋಗಿದ್ದ ಅಪ್ಪಯ್ಯ ಒಂದು ಸುತ್ತು ಹಾಕಿಸಿ ಕೊಪ್ಪಣ್ಣನ ಖಾನಾವಳಿಯಲ್ಲಿ ಕುಳ್ಳಿರಿಸಿ ಟಿಎಸ್ಎಸ್ಗೆ ತೆರಳಿದ್ದರು. ಅಪ್ಪಯ್ಯ ವಾಪಸಾಗುವುದು ತಡವಾಗುತ್ತದೆಂದು ಭಾವಿಸಿ ದೇವಿಕೆರೆ ಏರಿ ಮೇಲೆ ತಿರುಗಾಡ ತೊಡಗಿದೆ.

ಆಗ ನಾನು ನೋಡಿದ್ದು ಸಪೂರ ಮೈಕಟ್ಟಿನ, ಸಾಧಾರಣ ಎತ್ತರದ, ಉದ್ದ ಕೂದಲಿನ ವ್ಯಕ್ತಿ. ಅವರು ನನ್ನನ್ನು ದಾಟಿ ಹೋದ ಮೇಲೆ, ‘ಓಹೋ, ಇವರು ನಮ್ಮಶಂಕರ ಭಾಗವತರುಎಂದು ತಿಳಿಯಿತು. ಓಡಿ ಹೋಗಿ ಮಾತಾಡಿಸೋಣವೆಂದು ಯೋಚಿಸುತ್ತಿರುವಾಗಲೇ ಭಾಗವತರು ಜನರ ಮಧ್ಯದಲ್ಲಿ ಮರೆಯಾದರು. ಮತ್ತೆ ಓಡಾಡುವ ಮನಸ್ಸಾಗದೆ ಖಾನಾವಳಿಗೆ ಹಿಂದಿರುಗಿ ಹೊರಗಡೆಯ ಕಾಲುಮಣೆ ಮೇಲೆ ಕುಳಿತೆ.

ಅಪ್ಪಯ್ಯ ಸೊಸೈಟಿ ಕೆಲಸ ಮುಗಿಸಿ ಬರುವ ವರೆಗೂ ಏನೋ ಚಡಪಡಿಕೆ. ರಂಗಸ್ಥಳದಲ್ಲಿ ಮದ್ದಲೆ ನುಡಿಸುವ ಶಂಕರ ಭಾಗೋತ್ರು ಇಷ್ಟು ಹತ್ತಿರದಲ್ಲಿ ಸಿಕ್ಕಿದ್ರು. ಸಾದಾ ಡ್ರೆಸ್ಸ್ನಲ್ಲೂ ಎಷ್ಟು ಚೆಂದ ಕಾಣ್ತ್ರು. ಹ್ವಾಯ್..., ಎಂದು ಕೈ ಕಲುಕಬೇಕಿತ್ತು ಎಂಬ ಭಾವ ತುಮುಲದಲ್ಲಿ ಒದ್ದಾಡುತ್ತಿದ್ದೆ. ಅಪ್ಪಯ್ಯ ಬಂದು ತಮಾ, ಮನೆಗೆ ಹೋಪನ ಬಸ್ಸ್ ಇದ್ದು... ಎಂದು ಕರೆದಾಗಲೇ ಎಚ್ಚರವಾಯ್ತು. ಶಂಕರ ಭಾಗೋತನ್ನ ನೋಡ್ದೆ. ಇಲ್ಲೇ ಎಲ್ಲೋ ಇದ್ದ. ಹೋಗಿ ಕಾಣುವ ಎಂದು ಅಪ್ಪಯ್ಯನ ಬಳಿ ಹೇಳಿದೆ.

ಅದಕ್ಕೆ ಪೋರನಿಗೆ ಆಟದ ಮೇಳದವರ ಆಕರ್ಷಣೆ ಹೆಚ್ಚಾಯ್ತು ಎಂಬಂತೆ ಅಪ್ಪಯ್ಯ ನೋಡಿದ. ಈಗ ಬೇಡ. ಮುಂದೆ ಯಾವಾಗಾದರೂ ಆಟಕ್ಕೆ ಹೋದಾಗ ಚೌಕಿಮನೆಯಲ್ಲಿ ಕಂಡರಾಯ್ತು. ಸತ್ಕಾರ ಹೋಟೆಲ್ನಲ್ಲಿ ಮಸಾಲೆ ದೋಸೆ ತಿಂದು ಹೊರಡೋಣವೆಂದು ಅನುನಯಿಸಿ ಕೈ ಹಿಡಿದುಕೊಂಡು ಹೊರಟೇ ಬಿಟ್ಟ. ನಾನು ಶಂಕರ ಭಾಗವತರ ನೆನಪಲ್ಲೇ ಹೆಜ್ಜೆ ಹಾಕಿದೆ.

ಘಟನೆ ನಡೆದಾಗ ನನಗೆ ೧೦ ರಿಂದ ೧೨ ವರ್ಷವಿರಬಹುದು. ಅದಾಗಿ ಹದಿನೈದು ವರ್ಷವೇ ಉರುಳಿದೆ. ಅವಧಿಯಲ್ಲಿ ಯಕ್ಷಗಾನ ಪ್ರದರ್ಶನ, ಶಿರಸಿ ಪೇಟೆ, ಮತ್ತೆ ಹಲವೆಡೆ ಶಂಕರ ಭಾಗವತರನ್ನು ನೋಡಿದ್ದೇನೆ. ಬೇಕಾದಷ್ಟು ಮಾತಾಡಿದ್ದೇನೆ. ಪ್ರಮುಖವಾಗಿ ಅವರು ಮದ್ದಲೆ ನುಡಿಸುವ, ಅದರಿಂದ ನಾದ ಹೊಮ್ಮಿಸುವ ಪರಿಯನ್ನು ಕಂಡು (ಕೇಳಿ) ಕ್ಷಣಕ್ಕೂ ಬೆರಗಾಗುತ್ತಿದ್ದೇನೆ.

ಕರಾವಳಿ-ಮಲೆನಾಡಿನವರಿಗೆ ಗೊತ್ತಿದೆ. ಯಕ್ಷಗಾನ, ಕಲಾವಿದರ ಬಗೆಗಿನ ಸೆಳೆತವೇ ಅಂತಹುದು ಎಂದು. ಅದೇ ವಾತಾವರಣದಲ್ಲಿ ಬೆಳದ ನನ್ನಂಥವನಿಗೆ ಇಂತಹ ಅನುಭವವಾಗುವುದು ಸಹಜವೆಂದು ಈಗ ಅರಿವಾಗುತ್ತಿದೆ.

ಅದೇನೇ ಇರಲಿ, ಪ್ರಕೃತ ನಮ್ಮ ಅಭಿಮಾನದ ಬಂಡೆ ಶಂಕರ ಭಾಗವತರು ಯಕ್ಷಗಾನದ ಮದ್ದಲೆ ವಾದಕರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಶಂಕರ ಭಾಗವತರು ಮೂಲತಃ ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನ ಸಿಸ್ತಮುಡಿಯವರು. ದಕ್ಷಿಣೋತ್ತರ ಕನ್ನಡ ಜಿಲ್ಲೆಯಲ್ಲಿ ಅವರೀಗ ಮನೆಮಾತು. ಮದ್ದಲೆಯಲ್ಲಿ ವಿಶೇಷ ಪ್ರಾವೀಣ್ಯ ಸಂಪಾದಿಸಿರುವ ಭಾಗವತರು ಕುರಿತ ಅಧ್ಯಯನ ಪ್ರವೃತ್ತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಶಾಸ್ತ್ರೀಯತೆ, ಆಧುನಿಕತೆ ಎರಡನ್ನೂ ಕರಗತ ಮಾಡಿಕೊಂಡಿರುವ ಶಂಕರ ಭಾಗವತರು ಯಾವುದೇ ಮೇಳಕ್ಕೆ ದೊಡ್ಡ ಆಸ್ತಿ. ನಾನಂತೂ ಅವರನ್ನು ಯಾವಾಗಲೂ ತಬಲಾ ಮಾಂತ್ರಿಕ ಜಾಕೀರ್ ಹುಸೇನ್ಗೆ ಹೋಲಿಸುವುದರಲ್ಲಿ ಖುಷಿ ಪಡುತ್ತೇನೆ. ತಬಲಾವನ್ನೂ ಅಭ್ಯಾಸ ಮಾಡಿರುವ ಇವರು, ಮದ್ದಲೆ-ತಬಲಾದ ಜುಗಲ್ಬಂದಿ ವೇದಿಕೆಗಳನ್ನೂ ಹಂಚಿಕೊಂಡಿದ್ದಾರೆ.

ಒಂದು ವಿಸ್ಮಯವನ್ನು ಹೇಳಲೇಬೇಕು. ಲೋಕದ ಬೆಳಕು ಕಂಡು ೧೦ ವರ್ಷದ ವರೆಗೂ ಬಾಲಕ ಶಂಕರ ಮಾತೇ ಆಡಿರಲಿಲ್ಲವಂತೆ. ಆದರೆ, ಆಗಲೇ ಮದ್ದಲೆಯೊಂದಿಗೆ ಆಟ ಆಡುತ್ತಿದ್ದನಂತೆ. ಹೆತ್ತವರು ಹರಕೆ ಹೊತ್ತಿದ್ದರ ಫಲವಾಗಿ ಬಾಲಕನ ನಾಲಗೆಯಲ್ಲಿ ಶಬ್ದ ಸಂಚಾರವಾಯಿತಂತೆ.

ಶಂಕರ ಭಾಗವತರು ಕಲಾ ಬದುಕಿನ ಔನ್ನತ್ಯಕ್ಕೆ ಏರಿದ್ದಾರೆ. ಸಂದರ್ಭದಲ್ಲಿ ಅವರನ್ನು ಅಭಿನಂದಿಸಲು ರಾಜಧಾನಿಯ ಅಭಿಮಾನಿಗಳು ಸಜ್ಜಾಗಿದ್ದಾರೆ. ಇದೇ ಭಾನುವಾರ (ಏಪ್ರಿಲ್ ೧೯) ಮಧ್ಯಾಹ್ನ ಪುರಭವನದಲ್ಲಿನಾದ ವೈಭವ - ೫೫ಶೀರ್ಷಿಕೆಯಡಿ ಭಾಗವತರನ್ನು ಸಂಮಾನಿಸಲಾಗುತ್ತಿದೆ. ಯಕ್ಷಗಾನ ಪ್ರದರ್ಶನಗಳೂ ನಡೆಯಲಿವೆ. ಭಾಗವತರು ಏಕಕಾಲದಲ್ಲಿ ರಿಂದ ಮದ್ದಲೆ ನುಡಿಸುವ ಉತ್ಸಾಹದಲ್ಲಿ ಇದ್ದಾರೆ.

ಹೀಗಾಗಿ ಇದು ಶಂಕರನ ಧ್ಯಾನದ ಕಾಲ. ಶಂಕರ ಭಾಗೋತರ ಮೇಲಿನ ಪ್ರೀತಿ, ಅಭಿಮಾನಕ್ಕಾಗಿ ಬರೆಹ. ಜತೆಗೆ ಅವರು ಮದ್ದಲೆ ವಿಭಾಗದಲ್ಲಿ ಗೌರೀಶಂಕರದ ಎತ್ತರಕ್ಕೆ ಏರಲಿ ಎಂಬ ಹಾರೈಕೆ.

ಯಕ್ಷಲೋಕದ ಸವ್ಯಸಾಚಿಯ ನೆನಪು


ಕೆರೆಮನೆ ಶಂಭು ಹೆಗಡೆ ಅವರೊಂದಿಗೆ ಮಾತಾಡುತ್ತ ಕುಳಿತರೆ ಹೊತ್ತು ಹೋದದ್ದು ಗೊತ್ತಾಗುವುದಿಲ್ಲ. ಅವರ ಮಾತು ಎಂದೂ ಬೋರು ಹೊಡೆಸಿದ್ದಿಲ್ಲ. ಒಮ್ಮೊಮ್ಮೆ ಅವರು ಹಿಂದೆ ಹೇಳಿದ ವಿಚಾರವನ್ನೇ ಮತ್ತೆ ಪ್ರಸ್ತಾಪಿಸಿದರೂ ಆಲಿಸುವುದಕ್ಕೆ ಹರುಷವೇ ಆಗುತ್ತಿತ್ತು. ಮಹಾನ್ ಕಲಾವಿದ ಇಷ್ಟು ಆಕರ್ಷಕ ವ್ಯಕ್ತಿತ್ವವನ್ನು ಹೇಗೆ ರೂಪಿಸಿಕೊಂಡರು ಎಂದು ಅನೇಕ ಬಾರಿ ನನಗೆ ನಾನೇ ಪ್ರಶ್ನೆ ಕೇಳಿಕೊಂಡಿದ್ದೇನೆ.

ಚಿಕ್ಕಂದಿನಿಂದ ಶಂಭು ಹೆಗಡೆ ಪಾತ್ರ ನೋಡಿ ಪ್ರಭಾವಿತನಾಗಿದ್ದ ನನಗೆ, ಕಳೆದ ನಾಲ್ಕೈದು ವರ್ಷದಿಂದ ಈಚೆಗೆ ಅವರ ಆತ್ಮೀಯ ವಲಯದಲ್ಲೊಂದು ಸ್ಥಾನ ಸಿಕ್ಕಿತ್ತು. ಆಟ ನೋಡುವಾಗ ಚೌಕಿಗೆ ಹೋಗಿ ದೂರದಲ್ಲೇ ನಿಂತು ಹೆಗಡೆ ಅವರನ್ನು ಕಂಡು ಹಿಗ್ಗಿದ್ದು ನೆನಪಿದೆ. ಅನಂತರ ಅವರ ಸಾಮೀಪ್ಯ ದೊರಕಿದಾಗ ಇದು ಕನಸಾಗಿರಬಹುದೇ ಎಂದು ಭಾವಿಸಿದ್ದೂ ಇದೆ. ಆದರೆ, ಮರು ಕ್ಷಣದಲ್ಲಿ ಒಂದು ಕಾಲದಲ್ಲಿ ಕಂಡ ಕನಸು ನನಸಾಗಿದೆಯೆಂದು ಧನ್ಯತಾ ಭಾವ ಅನುಭವಿಸಿದ್ದೇನೆ.

ಈಗಲೂ ನೆನಪಿದೆ. ಕನ್ನಡ ಶಾಲೆ, ಹೈಸ್ಕೂಲಿಗೆ ಹೋಗುವಾಗ ಚಿತ್ರ ಬಿಡಿಸುವುದು ಬಹಳ ಅಪ್ಯಾಯಮಾನವಾಗಿತ್ತು. ಹೆಚ್ಚು ಚಿತ್ರ ಬಿಡಿಸುತ್ತಿದ್ದುದು ಯಕ್ಷಗಾನದ್ದೇ ಆಗಿತ್ತು. ಅದರಲ್ಲೂ ಶಂಭು ಹೆಗಡೆ ಪಾತ್ರದ ಚಿತ್ರ ಬರೆಯುವ ಹಠ. "ನೀನು ಯಕ್ಷಗಾನದ ಚಿತ್ರ ಬರೆದರೆ ಮೂಗು, ಮೀಸೆ, ಮುಖ ಶಂಭು ಹೆಗಡೆ ಅವರನ್ನೇ ಹೋಲುತ್ತದೆ" ಎಂದು ಸ್ನೇಹಿತರು ಕಿಚಾಯಿಸುತ್ತಿದ್ದರು. ನಾನು ನಿರುತ್ತರನಾಗುತ್ತಿದ್ದೆ. ಅಂತರಂಗದಲ್ಲಿ ಮಾತ್ರ ಶಂಭು ಹೆಗಡೇರ ವೇಷದ ಯಥಾವತ್ತು ಚಿತ್ರ ಮೂಡಿಸಲು ಆಗಲಿಲ್ಲವೆಂಬ ಬೇಸರ ಕಾಡುತ್ತಿತ್ತು.

ಚಿತ್ರ ಬಿಡಿಸುವುದರೊಂದಿಗೆ ಬರವಣಿಗೆಯ ಗೀಳು ಹುಟ್ಟಿಕೊಂಡಿತ್ತು. ಇದಕ್ಕೆ ಸ್ಫೂರ್ತಿಯೂ ಶಂಭು ಹೆಗಡೆಯವರೇ ಆಗಿದ್ದರು. ಒಣ ಪಾಂಡಿತ್ಯ ಪ್ರದರ್ಶನವಿಲ್ಲದ ಸರಳ, ಸುಲಭ ಸಂವಹನಶಾಲಿಯಾದ, ಸುಸಂಬದ್ಧವಾದ ಹೆಗಡೆಯವರ ಅರ್ಥಗಾರಿಕೆ ಶೈಲಿ ಮನಸ್ಸನ್ನು ಸೆಳೆದಿತ್ತು. ಹರಿಶ್ಚಂದ್ರ, ಕರ್ಣ, ನಳ, ರಾಮ ಸೇರಿದಂತೆ ಅನೇಕ ಪಾತ್ರಗಳಲ್ಲಿ ಅವರು ಕಟ್ಟಿಕೊಟ್ಟ ಅರ್ಥದ ಪದಪುಂಜಗಳಿಂದ ನನ್ನ ಆರಂಭದ ಬರಹಗಳಿಗೆ ಒಳ್ಳೆಯ ವಾಕ್ಯ ಜೋಡಣೆ ಮಾಡಲು ಸಾಧ್ಯವಾಗುತ್ತಿತ್ತು. ವಿಷಯವನ್ನು ಗುಣವಂತೆಯ ಶ್ರೀಮಯ ಯಕ್ಷಗಾನ ಕಲಾಕೇಂದ್ರದ ಕಚೇರಿಯಲ್ಲಿ ಮಾತಾಡುವಾಗ ಅವರಿಗೇ ತಿಳಿಸಿದ್ದೆ. ಅದಕ್ಕೆ ಗಂಭೀರವದನರಾಗಿ ನಕ್ಕು ಸುಮ್ಮನಾಗಿದ್ದರು.

ಶಂಭು ಹೆಗಡೆಯವರು ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಬೆಂಗಳೂರಿನಲ್ಲಿ ಅವರನ್ನು ಭೇಟಿಯಾಗುವುದು ಸಂಭ್ರಮವಾಗಿತ್ತು. ಕನ್ನಡ ಭವನದ ಕಚೇರಿಯಲ್ಲೋ, ಸರಸ್ವತಿ ಲಾಡ್ಜ್ನಲ್ಲೋ ಅವರೊಂದಿಗೆ ಮಾತುಕತೆ ನಡೆಯುತ್ತಿತ್ತು. "ನಿಮಗೆ ಬಿಡುವಿದ್ದರೆ ಖಂಡಿತ ಬನ್ನಿ. ನನಗೆ ಮಾತಾಡಲು ಅಭ್ಯಂತರವಿಲ್ಲ. ಬೇಕಾದಷ್ಟು ವಿಷಯಗಳಿವೆಎಂದು ಹೆಗಡೆ ಯಾವಾಗಲೂ ಹೇಳುತ್ತಿದ್ದರು. ನನ್ನಂತಹ ಚಿಕ್ಕ ಪ್ರಾಯದವರನ್ನೂ ಬಹುವಚನದಿಂದಲೇ ಮಾತಾಡಿಸುತ್ತಿದ್ದರು. ಕೇಳಲು ಮುಜುಗರವಾಗುತ್ತಿತ್ತು. ಅವರಲ್ಲಿ ನಿವೇದಿಸಿಕೊಂಡರೂ ಅಪ್ಪಿತಪ್ಪಿಯೂ ಏಕವಚನ ಪ್ರಯೋಗ ಮಾಡುತ್ತಿರಲಿಲ್ಲ.

ನಾನು ಮೊದಲ ಬಾರಿ ಅವರನ್ನು ಗಟ್ಟಿಯಾಗಿ ಪರಿಚಯ ಮಾಡಿಕೊಂಡಾಗ ಬೆಂಗಳೂರಿನ ಗಿರಿನಗರದ ರಾಮಾಶ್ರಮದಲ್ಲಿ ವಿಜಯ ಕರ್ನಾಟಕಕ್ಕಾಗಿ ಸಂದರ್ಶನ ಮಾಡಿದ್ದೆ. ಆಗ ಎರಡು ದಿನ ಕೆರೆಮನೆ ಮೇಳದ ಆಟ ನಡೆದಿತ್ತು. ಶಂಭು ಹೆಗಡೇರು ಸಂಧಾನದ ಕೃಷ್ಣ, ದಮಯಂತಿ ಪುನಃಸ್ವಯಂವರದ ಬಾಹುಕನ ಪಾತ್ರ ನಿರ್ವಹಿಸಿದ್ದರು. ಆಗಿನ ಭೇಟಿಯಲ್ಲಿ ನನ್ನನ್ನೇ ಅವರು ಸಂದರ್ಶಿಸಿದ್ದರು. ಅಂದರೆ ಪ್ರತಿ ಪ್ರಶ್ನೆ ಕೇಳಿದಾಗಲೂ ಅವರು ಅದಕ್ಕೆ ಪೂರಕವಾಗಿ ಹತ್ತು ಪ್ರಶ್ನೆ ಹಾಕುತ್ತಿದ್ದರು. ಅಂತೂ ಸಂದರ್ಶನ ಪೂರ್ಣಗೊಳಿಸಿದಾಗ ಸುಸ್ತಾಗಿತ್ತು. ನಂತರದ ಭೇಟಿಗಳಲ್ಲೂ ಅವರು ನನ್ನನ್ನು ಚಕಿತ್ಸಕ ದೃಷ್ಟಿಯಿಂದಲೇ ಪರೀಕ್ಷಿಸುತ್ತಿದ್ದರು. ಯಕ್ಷಗಾನದ ಬಗ್ಗೆ ಆಸಕ್ತಿ ಉಂಟೋ ಇಲ್ಲವೋ ಜತೆಗೆ ಬಗೆಗಿನ ಜ್ಞಾನ ಎಷ್ಟಿದೆ ಎಂಬುದನ್ನು ಖಾತರಿ ಪಡಿಸಿಕೊಳ್ಳಲು ಹಾಗೆ ಮಾಡಿದರೆಂದು ಕಡೆಗೆ ಅರ್ಥವಾಯಿತು.

ನನ್ನ ಯಕ್ಷಗಾನ ಸಂಬಂಧಿ ಬರಹ, ಪ್ರದರ್ಶನ ಆಧರಿತ ವಿಮರ್ಶೆಗಳ ಕುರಿತೂ ಮೊದಮೊದಲು ಶಂಭು ಹೆಗಡೆ ಆಸಕ್ತಿ ತೋರುತ್ತಿರಲಿಲ್ಲ. ಬರಬರುತ್ತಾ ವಿಚಾರದಲ್ಲೂ ಪ್ರತಿಕ್ರಿಯೆ ಕೊಡುತ್ತಿದ್ದರು. ಅಲ್ಲಿವರೆಗೆ "ಯಕ್ಷಗಾನದಲ್ಲಿ ವಿಮರ್ಶೆಯೆಂದರೆ, ವೈಭವೀಕರಣ ಹಾಗೂ ಕಟು ಟೀಕೆ" ಎಂದು ನಿಷ್ಠುರವಾಗಿ ಹೇಳುತ್ತಿದ್ದರು. ಹಾಗಂತ ನನ್ನ ವಿಮರ್ಶಾ ಬರಹಗಳನ್ನು ಶ್ಲಾಘಿಸಿದರು ಎಂದು ಬೆನ್ನು ಚಪ್ಪರಿಸಿಕೊಂಡು ಇತಿಹಾಸಕ್ಕೆ ಅಪಚಾರ ಮಾಡಲಾರೆ. ಬರೆಯುವ ಸಾಧ್ಯತೆ, ಅರ್ಹತೆಯಿದೆ. ನಿಟ್ಟಿನಲ್ಲಿ ಅಧ್ಯಯನ ಅಗತ್ಯ. ಒಬ್ಬ ಕಲಾವಿದನೊಂದಿಗೆ ಇನ್ನೊಬ್ಬ ಕಲಾವಿದನನ್ನು ಹೋಲಿಸುವುದನ್ನೇ ಅಳತೆಗೋಲಾಗಿ ಸ್ವೀಕರಿಸಬಾರದು. ಪೂರ್ವ ಪರಂಪರೆ, ಹೊಸ ಸೃಷ್ಟಿಯ ಬಗ್ಗೆ ಗಂಭೀರ ಅಧ್ಯಯನ ಮಾಡಿಕೊಳ್ಳಬೇಕು ಎಂದು ಎಚ್ಚರಿಸುತ್ತಿದ್ದರು. ಆಯಾ ಪಾತ್ರದ ಗುಣ, ಸ್ವಭಾವ, ಕಥೆಯ ಅಂತರ್ದೃಷ್ಟಿ, ಒಟ್ಟಾರೆ ಪ್ರದರ್ಶನದ ಪರಿಣಾಮ, ಸಂದೇಶದ ಕುರಿತಾಗಿಯೂ ವಿವೇಚನೆಯಿಂದ ಅರಿತುಕೊಳ್ಳಬೇಕು ಎನ್ನುತ್ತಿದ್ದರು.

ಶಂಭು ಹೆಗಡೆ ಅವರೊಂದಿಗಿನ ಆಪ್ತತೆ ಎನ್ನುವುದು ಇತ್ತೀಚೆಗೆ ಸಲುಗೆಯಾಗಿಯೂ ಪರಿವರ್ತನೆಗೊಂಡಿತ್ತು. ಹೆಗಡೇರ ಜತೆಗೆ ಯಾವಾಗ ಬೇಕಾದರೂ ಸಮಾಲೋಚನೆಗೆ ತೊಡಗಬಹುದು. ಅವರು ಮುಕ್ತವಾಗಿ ಸ್ಪಂದಿಸುತ್ತಾರೆಂಬ ವಿಶ್ವಾಸ ಬೆಳೆಯಿತು. ಇದನ್ನು ಒಂದು ರೀತಿಯ ಹಮ್ಮು ಎಂದೂ ಅರ್ಥೈಸಿಕೊಂಡರೆ ತಪ್ಪಾಗದು. ಯಾಕೆಂದರೆ ಸಲುಗೆ ಎನ್ನುವುದು ಅಗತ್ಯಕ್ಕಿಂತ ಹೆಚ್ಚು ವಿಶ್ವಾಸವನ್ನೂ ತಂದು ಕೊಟ್ಟು ಬಿಡುತ್ತದೆ. ಬೆಳವಣಿಗೆ ಅನೇಕ ಸಂಬಂಧಗಳಲ್ಲಿ ವೈಮನಸ್ಯ ತಂದ ನಿದರ್ಶನಗಳಿವೆ. ಶಂಭು ಹೆಗಡೆ ಮತ್ತು ನನ್ನ ಬಾಂಧವ್ಯದಲ್ಲಿ ಅಂತಹ ಅಪಾಯಕ್ಕೆ ಎಲ್ಲಿಯೂ ಎಡೆಯಾಗಲಿಲ್ಲ. ವಿಷಯಾಧಾರಿತವಾಗಿ ಹೆಗಡೇರ ಕೆಲ ನಿಲುವುಗಳು ಒಪ್ಪಿತವಾಗದಿದ್ದರೂ ಅವರ ಮೇಲಿನ ಗೌರವ ಎಳ್ಳಿನಿತೂ ಕಡಿಮೆಯಾಗಲಿಲ್ಲ. ಯಕ್ಷಗಾನ ವಲಯದಲ್ಲಿ ಕಲಾವಿದರು, ಸಹೃದಯರೊಂದಿಗೆ ಶಂಭು ಹೆಗಡೆಯವರ ಬಗ್ಗೆ ಚರ್ಚಿಸಿದ್ದಿದೆ. ಪರ, ವಿರೋಧ ವಾದವೂ ನಡೆದಿದೆ. ತಾತ್ವಿಕ ನೆಲೆಯಲ್ಲಿ ಹೆಗಡೆಯವರ ಕೆಲವೊಂದು ಧೋರಣೆ ಕುರಿತು ತೀರ ವಿರಳವಾಗಿ ಇತರರಲ್ಲಿ ಅಸಮಾಧಾನ ತೋಡಿಕೊಂಡಿದ್ದೂ ಇದೆ. ಆದರೆ, ಯಾವ ಕಾಲಕ್ಕೂ ಆದರ್ಶದ ಹಾಗೂ ನಾನು ಆರಾಧಿಸುವ ಕಲಾವಿದರಾಗಿ ಗೋಚರಿಸಿದ್ದು ಶಂಭು ಹೆಗಡೆಯವರೇ.

ಪ್ರಾರಂಭದಲ್ಲಿ ಶಂಭು ಹೆಗಡೆ ಅವರೊಂದಿಗೆ ಸಮಾಲೋಚಿಸುವಾಗ ರೆಕಾರ್ಡ್ ಮಾಡಿಕೊಳ್ಳಬೇಕು ಎನ್ನಿಸುತ್ತಿತ್ತು. ಅದಕ್ಕೆ ಅವರು ಆಸ್ಪದ ಕೊಡುತ್ತಿರಲಿಲ್ಲ (ಆಗಿನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ). ಆತ್ಮೀಯತೆ ಬೆಳೆದ ಮೇಲೆ ರೆಕಾರ್ಡ್ ಮಾಡಿಕೊಂಡಿದ್ದರೆ ಬೇಡವೆನ್ನುತ್ತಿರಲಿಲ್ಲ. ಆದರೆ, ಮೊದಲೇ ತಿಳಿಸಿದಂತೆ ಹೆಗಡೆಯವರೊಂದಿಗೆ ಸಲುಗೆ ಬೆಳೆದಿತ್ತಲ್ಲ ? ಜತೆಗೆ ಯಾವಾಗ ಬೇಕಾದರೂ ಕೇಳಿದ್ದಕ್ಕೆಲ್ಲ ಯಾವ ಹಿಗ್ಗು, ಸಿಗ್ಗೂ ಇಲ್ಲದೇ ಉತ್ತರಿಸಿ ಮಾರ್ಗದರ್ಶನ ಮಾಡುತ್ತಾರೆಂಬ ವಿಶ್ವಾಸವೂ ಮೂಡಿ ಬಿಟ್ಟಿತ್ತು. ಹೀಗಾಗಿ ಶಂಭು ಹೆಗಡೆಯವರ ಅನೇಕ ಮೌಲ್ಯಯುತವಾದ, ಯಕ್ಷಗಾನ ರಂಗದ ಬೆಳವಣಿಗೆ, ಸುಧಾರಣೆಗೆ ಅತ್ಯವಶ್ಯವಾದ ವಿಚಾರಧಾರೆಗಳನ್ನು ದಾಖಲಿಸಿಕೊಳ್ಳುವುದರಿಂದ ವಂಚಿತನಾದೆ. ಬೇರೆಯವರು ಮಹತ್ವದ ಕಾರ್ಯವನ್ನು ಒಂದು ಹದದಲ್ಲಿ ಮಾಡಿದ್ದಾರೆ. ಆದರೆ, ವೈಯಕ್ತಿಕ ಜ್ಞಾನ ಸಂಪಾದನೆಗಾದರೂ ಶಂಭು ಹೆಗಡೆ ಎನ್ನುವ ಅಕ್ಷಯಪಾತ್ರೆಗೆ ಕೈಹಾಕಿದಾಗಲೆಲ್ಲ ಸಂಪತ್ತನ್ನು ಗಳಿಸಿಕೊಳ್ಳುವ ಅವಕಾಶದಿಂದ ವಿಧಿ ವಂಚಿಸಿತು. ಪ್ರಮಾದಕ್ಕಾಗಿ ಮನದ ಮೂಲೆಯಲ್ಲಿ ಅಪರಾಧಿ ಪ್ರಜ್ಞೆ ಆವರಿಸಿಕೊಂಡಿದೆ.

ಶಂಭು ಹೆಗಡೆ ಇಷ್ಟು ಬೇಗ ಭೌತಿಕ ಶರೀರ ತೊರೆದು ಮತ್ತೆ ಬಾರದ ಲೋಕಕ್ಕೆ ತೆರಳುತ್ತಾರೆ. ಯಕ್ಷಲೋಕದ ರಾಮಾವತಾರಕ್ಕೆ ತೆರೆ ಎಳೆಯುತ್ತಾರೆಂದು ಎಣಿಸುವುದಕ್ಕೂ ಸಾಧ್ಯವಿರಲಿಲ್ಲ. ಅವರು ಇನ್ನೂ ಬಹುಕಾಲ ನಮ್ಮೊಂದಿಗೆ ಇದ್ದಿದ್ದರೆ, ಕಡೆ ಪಕ್ಷ ಅವರು ಹೇಳಿದ್ದನ್ನು ಬರೆದು ಪ್ರಕಟಿಸಿದ್ದರೂ ಬೃಹತ್ ಗ್ರಂಥವಾಗುತ್ತಿತ್ತು. ಯಕ್ಷರಂಗಭೂಮಿಯ ದೊಡ್ಡ ಆಸ್ತಿಯಾಗುತ್ತಿತ್ತು. ಅಂತಹ ಸಂಪತ್ತಿನ ಮೂಲವನ್ನೇ ಈಗ ಕಳೆದುಕೊಂಡಿದ್ದೇವೆ. ನನ್ನ ಪಾಲಿಗೆ ಶಂಭು ಹೆಗಡೆಯವರೊಂದಿಗಿನ ಒಡನಾಟದ ಅನುಕ್ಷಣವೂ ಸುಮಧುರವೇ ಆಗಿದೆ. ಅವರು ಇಹಲೋಕ ತ್ಯಜಿಸಿದಾಗ ಅಂತಿಮ ದರ್ಶನ ಪಡೆದ ಭಾಗ್ಯವೂ ನನ್ನದಾಗಿದೆ. ವಿಜಯ ಕರ್ನಾಟಕದ ವರದಿಗಾರನಾಗಿ ಶಂಭು ಹೆಗಡೆಯವರ ನಿಧನ, ಅಂತ್ಯ ಸಂಸ್ಕಾರದ ವರದಿ ಮಾಡುವ ಅವಕಾಶವೂ ಸಿಕ್ಕಿತು.

ಶಂಭು ಹೆಗಡೆ ಅವರನ್ನು ನೆನಪಿಸಿಕೊಂಡಾಗ ಈಗಲೂ ಹ್ವಾಯ್ ನಂದಿಕಲ್ ಕಡೇಗ್ರ... ಎಂದು ಕರೆದಂತೆ ಅನ್ನಿಸುತ್ತದೆ. ನನ್ನ ಮೇಲೆ ಬದುಕಿನ ಹಲವು ಸಂದರ್ಭದಲ್ಲಿ ಗೊತ್ತಿದ್ದು, ಗೊತ್ತಿಲ್ಲಿದೆಯೋ, ಪ್ರತ್ಯಕ್ಷ, ಪರೋಕ್ಷವಾಗಿ ಪ್ರಭಾವ ಬೀರಿದವರು ಶಂಭು ಹೆಗಡೆ. ಅವರು ಯಕ್ಷಲೋಕದ ಸವ್ಯಸಾಚಿಯಷ್ಟೇ ಅಲ್ಲ. ನನಗೆ ಕ್ಷೇತ್ರದ ದಿವ್ಯ ಶಕ್ತಿ, ವಿಸ್ಮಯವಾಗಿಯೂ ಗೋಚರಿಸಿದ್ದರು. ಅವರ ಬಗ್ಗೆ ಇನ್ನಷ್ಟು ಮತ್ತಷ್ಟು ಬರೆಯಬೇಕೆಂದುಕೊಂಡಿದ್ದೇನೆ.
(ಫೋಟೊ ಕ್ರಪೆ : ಬಾಲು ಮಂದರ್ತಿ)

Last Posts