ಹಡಗಿನ ಬಾಗಿಲಿನ ಸ್ವಾಭಿಮಾನಿ ಕಲಾವಿದ

ಕಂದ್ದನ್ನು ಕಂಡ ಹಾಗೆ ಖಡಕ್ ಆಗಿ ಹೇಳುವ ನಿಷ್ಠುರವಾದಿ. ಆತ್ಮಾಭಿಮಾನಕ್ಕೆ ಪೆಟ್ಟು ಕೊಡುವ ಮಾತನ್ನು ಯಾರೇ ಆಡಿದರೂ ಸಹಿಸುವ ಜಾಯಮಾನದವರಲ್ಲ. ಸಹೃದಯಿ. ಭಾವಜೀವಿ. ಎಲ್ಲಕ್ಕಿಂತ ಮುಖ್ಯವಾಗಿ ಕೊಟ್ಟ ಪಾತ್ರವನ್ನು ಅತ್ಯಂತ ಚೊಕ್ಕದಾಗಿ ನಿರ್ವಹಿಸುವ ಪ್ರಾಮಾಣಿಕ.

ಯಕ್ಷಗಾನ ಕಲಾವಿದ ಹಡಿನಬಾಳು ಶ್ರೀಪಾದ ಹೆಗಡೆ ಅವರ ವ್ಯಕ್ತಿತ್ವಕ್ಕೆ ಇದಕ್ಕಿಂತ ಹೊರತಾದ ಚೌಕಟ್ಟು ಕಟ್ಟಲು ಸಾಧ್ಯವಾಗುವುದಿಲ್ಲ. ಉತ್ತರ ಕನ್ನಡದ ಹೊನ್ನಾವರ ತಾಲೂಕಿನಲ್ಲಿ ಬ್ರಿಟೀಷರ ಕಾಲದಲ್ಲಿ ‘ಹಡಗಿನ ಬಾಗಿಲು’ ಎಂದಿದ್ದ ಊರು ವ್ಯತ್ಯಸ್ಥಗೊಂಡು ಹಡಿನಬಾಳು ಆಗಿದೆ. ಈ ಕಡಲ ಕಿನಾರೆಯಿಂದ ಬಂದಿರುವ ಶ್ರೀಪಾದ ಹೆಗಡೆ ಅವರದ್ದು ಯಕ್ಷಗಾನದಲ್ಲಿ ಅಲೆ ಎಬ್ಬಿಸಿದ ಜನಪ್ರಿಯ ಹೆಸರಲ್ಲ. ಆದರೆ, ಅವರು ‘ಜನ ಪ್ರೀತಿ’ ಗಳಿಸಿದ ಕಲಾವಿದ.

ರಂಗಸ್ಥಳದಲ್ಲಿ ಸ್ವರ್ಣ ವರ್ಣ ಲೇಪಿತ ವೇಷಭೂಷಣದಿಂದ ಶೋಭಿಸುವ ಶ್ರೀಪಾದ ಹೆಗಡೆ, ನಿಜ ಜೀವನದಲ್ಲಿ ಬಡತನದ ಬೇಗೆಯಲ್ಲಿ ಬೆಂದಿದ್ದಾರೆ. ಅದನ್ನು ಎಲ್ಲಿಯೂ ಹೇಳಿಕೊಂಡವರೂ ಅಲ್ಲ. ಬದುಕು ಸಾಗಿಸಲು ಯಕ್ಷಗಾನದೊಟ್ಟಿಗೆ ಹೊಲಿಗೆ, ವೀಳ್ಯದ ಎಲೆ ವ್ಯಾಪಾರ, ಕೊಡೆ ರಿಪೇರಿ, ಗಣಪತಿ ಮೂರ್ತಿ ಮಾಡುವ ವೃತ್ತಿಯನ್ನೂ ಅಪ್ಪಿಕೊಂಡಿದ್ದಾರೆ.

ಕಲಾವಿದರಾಗಿ ಶ್ರೀಪಾದ ಹೆಗಡೆ ಗಟ್ಟಿ ಪ್ರತಿಭೆ. ಕೆರೆಮನೆ ಮಹಾಬಲ ಹೆಗಡೆ ಅವರಂತಹ ಮೇರು ನಟರಲ್ಲಿ ವಿದ್ಯಾರ್ಥಿಯಾಗಿ ಅಭ್ಯಾಸ ಮಾಡಿದ್ದಾರೆ. ಮಹಾಬಲ ಹೆಗಡೆ ಪ್ರಭಾವವು ಪ್ರತ್ಯಕ್ಷ, ಪರೋಕ್ಷವಾಗಿ ಅನೇಕ ಕಲಾವಿದರ ಮೇಲೆ ಆಗಿದೆ. ಆದರೆ, ಈಗಲೂ ಮಹಾಬಲರನ್ನು ಮಾತಾಡಿಸಿದರೆ, ‘ಹಡಿನಬಾಳು ಶ್ರೀಪಾದ ನನ್ನ ವಿದ್ಯಾರ್ಥಿ’ ಎಂದು ಮೆಚ್ಚುಗೆಯ ಪ್ರಶಸ್ತಿ ಕೊಡುತ್ತಾರೆ. ಇದು ಹಡಿನಬಾಳರಿಗೆ ಸಲ್ಲುವ ದೊಡ್ಡ ಗೌರವವೇ ಸರಿ. ಮುನ್ನುಗ್ಗುವ, ಓಲೈಸುವ ಸ್ವಭಾವಕ್ಕೆ ಕಟ್ಟು ಬೀಳದಿರುವುದರಿಂದ ಅದೆಷ್ಟೋ ಅವಕಾಶದಿಂದ ವಂಚಿತರಾಗಿದ್ದೂ ನಿಜ.

ಅಜಾನುಬಾಹು ಹಡಿನಬಾಳು ಧೈತ್ಯ, ದಾನವ ವೇಷಗಳಿಗೆ ಹೇಳಿ ಮಾಡಿಸಿದಂತಹ ಕಲಾವಿದ. ಸಾತ್ವಿಕ ಪಾತ್ರಗಳನ್ನೂ ಸಮರ್ಥವಾಗಿಯೇ ತೂಗಿಸುತ್ತಾರೆ. ಕೃಷ್ಣ ಸಂಧಾನದ ಶ್ರೀಪಾದರ ಕೌರವ, ಸುಭದ್ರಾ ಕಲ್ಯಾಣದ ಬಲರಾಮ, ದಮಯಂತಿ ಪುನಃಸ್ವಯಂವರದ ಋತುಪರ್ಣನಂತಹ ಪಾತ್ರಗಳು ಬಹಾಬಲರು ಹಾಕಿ ಕೊಟ್ಟ ನಡೆಯಲ್ಲೇ ಇರುತ್ತವೆ. ಗದಾಯುದ್ಧದ ಭೀಮ, ಕಾರ್ತವೀರ್ಯಾರ್ಜುನದ ರಾವಣ, ಕೀಚಕವಧೆಯ ವಲಲ, ಕರ್ಣಪರ್ವದ ಶಲ್ಯ, ಶರಸೇತು ಬಂಧನದ ಅರ್ಜುನ, ವಾಲಿವಧೆಯ ವಾಲಿಯ ಪಾತ್ರಗಳು ಕಲಾಸಕ್ತರ ಚಿತ್ತಭಿತ್ತಿಯಲ್ಲಿ ಅಚ್ಚೊತ್ತಿವೆ. ಹನುಮಂತ, ಅಶ್ವತ್ಥಾಮ, ರಕ್ತಜಂಘ ಸೇರಿದಂತೆ ಹಲವು ಪಾತ್ರಗಳೂ ಇವರದ್ದೇ ಆದ ರೀತಿಯಲ್ಲಿ ಇವೆ.

ಬಣ್ಣಗಾರಿಕೆ, ಮುಖವರ್ಣಿಕೆಯಲ್ಲೂ ಹಡಿನಬಾಳು ವಿಶೇಷ ಪ್ರಾವೀಣ್ಯ ಹೊಂದಿದ್ದಾರೆ. ಅರ್ಥಗಾರಿಕೆಯಲ್ಲಿ ವೈಚಾರಿಕತೆ ಇದೆ. ಶರಾವತಿಯ ಮತ್ತೊಂದು ದಡದ ಮಾಳ್ಕೋಡು, ಶ್ರೀಪಾದರ ಮೂಲ ಊರು. ಯಕ್ಷಗಾನದ ಮುಕ್ತ ವಿಶ್ವವಿದ್ಯಾಲಯದಂತಿರುವ ಗುಂಡಬಾಳದಲ್ಲೇ ಪ್ರಥಮವಾಗಿ ಗೆಜ್ಜೆ ಕಟ್ಟಿದ್ದಾರೆ. ಮೊದಲ ವೇಷ ಹಾಸ್ಯಗಾರನದ್ದು. ಆಗ ಮಹಾಬಲ ಹೆಗಡೆಯವರೇ ‘ಹಾಸ್ಯ ಮಾಡಿ ಆಯುಷ್ಯ ಹಾಳು ಮಾಡಿಕೊಳ್ಳಬೇಡ’ ಎಂದು ಗದರಿಸಿ ಮನೆಗೆ ಕರೆದು ಹೆಜ್ಜೆ ಕಲಿಸಿದರಂತೆ.

ಹಡಿನಬಾಳರ ಮೇಲೆ ವಿಶ್ವಾಸ ಮೂಡಿದ ದಿನ ಮಹಾಬಲ ಹೆಗಡೆ, ‘ನಾನು ಹೇಳಿದರೆ ನಿನ್ನನ್ನು ಯಾವ ಮೇಳದವರೂ ಸೇರಿಸಿಕೊಳ್ಳುತ್ತಾರೆ. ಹೊರಟು ಬಿಡು’ ಎಂದಾಗ ‘ಹಾಗೆಲ್ಲ ಮೇಳಕ್ಕೆ ಹೋಗಿ ನಿಮ್ಮ ಹೆಸರು ಕೆಡಿಸಲಾರೆ’ನೆಂದು ನಯವಾಗಿ ಒಲ್ಲೆ ಎಂದಿದ್ದನ್ನು ಶ್ರೀಪಾದ ಹೆಗಡೆ ನೆನಪು ಮಾಡಿಕೊಳ್ಳುತ್ತಾರೆ. ನಂತರ ಸ್ವಂತ ಸಾಮರ್ಥ್ಯದಿಂದಲೇ ಬಡಗುತಿಟ್ಟಿನ ಪ್ರಮುಖ ಮೇಳಗಳಲ್ಲಿ ವೇಷ ಮಾಡಿದ್ದಾರೆ. ಈ ವರ್ಷ ಪೆರ್ಡೂರು ಮೇಳಕ್ಕೆ ಸೇರ್ಪಡೆಗೊಂಡು ಪ್ರಧಾನ ವೇಷಧಾರಿಯಾಗಿ ಬಡ್ತಿ ಪಡೆದಿದ್ದಾರೆ. ಅದು ಅವರಿಗೆ ಯಶಸ್ಸು ತರಲೆಂದು ಅಪೇಕ್ಷಿಸೋಣ.
(೨೦೦೯ ರ ಜುಲೈ ೫ ರಂದು ಎಡಿಎ ರಂಗಮಂದಿರದಲ್ಲಿ ಶ್ರೀಪಾದ ಹೆಗಡೆ ಅಭಿನಂದನೆ ಸಂದರ್ಭದಲ್ಲಿ ವಿಕದಲ್ಲಿ ಪ್ರಕಟಗೊಂಡ ಲೇಖನ)

ಮಹಾಬಲರಿಗೆ ಅಕ್ಷರಾಂಜಲಿ...


ಭೈರವೇಶ್ವರ ಶಿಖರದ ಮತ್ತೊಂದು ಮುಕುಟವೂ ಕಳಚಿತು

ಭೈರವೇಶ್ವರ ಶಿಖರದ ಮತ್ತೊಂದು ಮುಕುಟ ಕಳಚಿ ಬಿದ್ದಿದೆ. ಕೆರೆಮನೆ ಮಹಾಬಲ ಹೆಗಡೆ ಭೌತಿಕ ಪ್ರಪಂಚ ತೊರೆಯುವ ಮೂಲಕ ಯಕ್ಷಲೋಕದ ತುರಾಯಿಯೇ ಜಾರಿ ಹೋಗಿದೆ.

ಯಾಣದ ಭೈರವೇಶ್ವರ ಶಿಖರದಂತೆ ಯಕ್ಷಗಾನದಲ್ಲಿ ಇದ್ದವರು ಕೆರೆಮನೆ ಸಹೋದರರಾದ ಮಹಾಬಲ ಹೆಗಡೆ, ಶಂಭು ಹೆಗಡೆ. ಇಡಗುಂಜಿಯ ವಿನಾಯಕ ದೇವರ ಸನ್ನಿಯಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸುತ್ತಿದ್ದಾಗಲೇ ಶಂಭು ಹೆಗಡೆ, ಈ ಲೋಕದ ಯಾತ್ರೆ ಮುಗಿಸಿದ್ದರು. ಈ ದುಃಖ ಮಾಸುವ ಮುನ್ನವೇ ಮಹಾಬಲರೂ ಹೊರಟು ಹೋಗಿರುವುದು ದೊಡ್ಡ ಆಘಾತ.

ಯಕ್ಷರಂಗ ಒಪ್ಪಿ ಅಭಿಮಾನದಿಂದ ಬೀಗಿದಂತೆ ಮಹಾಬಲ ಹೆಗಡೆ ನಿಜಾರ್ಥದಲ್ಲಿ ‘ಯಕ್ಷಗಾನದ ಮಹಾಬಲ’ರೇ ಆಗಿದ್ದರು. ಅದು ಅವರ ಚಿಕ್ಕಪ್ಪ, ಸರ್ವೋತ್ಕೃಷ್ಟ ನಟ ದಿ. ಶಿವರಾಮ ಹೆಗಡೆ ಕಾಲದಲ್ಲೇ ಸಂದ ಬಿರುದಾಗಿತ್ತು. ಮುಮ್ಮೇಳ, ಹಿಮ್ಮೇಳಗಳೆರಡನ್ನೂ ಅರಿತು ರಾಗ, ತಾಳಗಳ ಬಗ್ಗೆ ಖಚಿತ ಜ್ಞಾನವಿದ್ದ ಏಕೈಕ ಕಲಾವಿದ ಮಹಾಬಲ ಹೆಗಡೆ. ಶ್ರುತಿಬದ್ಧವಾಗಿ ಹಾಡಿಕೊಂಡೇ ಅಭಿನಯಿಸಿ ಅರ್ಥ ಹೇಳುವುದು ಅವರಿಗಷ್ಟೆ ಸಿದ್ಧಿಸಿತ್ತು. ಹಿಂದೂಸ್ಥಾನಿಯ ಸಂಪರ್ಕದಿಂದಾಗಿ ಭಾಗವತಿಕೆಯಲ್ಲಿ ರಾಗದ ಖಚಿತತೆ ಬಯಸುತ್ತಿದ್ದರು. ಅದಕ್ಕಾಗಿಯೇ ಅವರಿಗೆ ಎಂತಹ ಭಾಗವತ ಹಾಡಿದರೂ ಸರಿ ಬರುತ್ತಿರಲಿಲ್ಲ. ಕಡು ನಿಷ್ಠುರವಾಗಿಯೇ ನಡೆದುಕೊಳ್ಳುತ್ತಿದ್ದರು.

ಎಳವೆಯಲ್ಲಿ ಮಹಾಬಲ ಕಿಲಾಡಿ ಪೋರ. ಆಲೆಮನೆಯ ಬೆಲ್ಲದ ಕೊಪ್ಪರಿಗೆಯಲ್ಲಿ ಉಚ್ಚೆ ಹೊಯ್ದ ತುಂಟ. ಈ ಮಾಣಿ ಫಟಿಂಗ ಆಗುವುದು ಬೇಡವೆಂದು ಶಿವರಾಮ ಹೆಗಡೆ ರಂಗಕ್ಕೆ ತಂದರಂತೆ. ನಂತರ ಚಿಕ್ಕಪ್ಪನ ನೆರಳಿನಲ್ಲೇ ಬೆಳೆದ ಮಹಾಬಲ, ಸ್ವಂತ ಪರಿಶ್ರಮದಿಂದಲೇ ಎತ್ತರಕ್ಕೆ ಏರಿದರು. ಶಾಲೆ ವಿದ್ಯಾಭ್ಯಾಸ ಕಡಿಮೆಯಾದರೂ ರಂಗದ ಕುರಿತಾದ ಅಧ್ಯಯನದಿಂದ ವೈಚಾರಿಕ ಸಂಪನ್ನರಾದರು. ಇದಕ್ಕೆ ಅವರ ಪಾತ್ರಗಳು ಆಡುತ್ತಿದ್ದ ಮಾತುಗಳೇ (ಅರ್ಥಗಾರಿಕೆ) ಸಾಕ್ಷಿ. ರಂಗಕ್ಕೆ ಒಗ್ಗುವ ಹಾಗೆ ಪ್ರಾದೇಶಿಕ ಪದಗಳ (ಗ್ರಾಮೀಣ/ ಗಾಂವಟಿ ಶಬ್ದ) ಬಳಕೆ ಮಹಾಬಲ ಹೆಗಡೆ ಶೈಲಿ ವೈಶಿಷ್ಟ್ಯ. ಇದನ್ನೇ ಇನ್ನೊಬ್ಬರು ಹೇಳಿದರೆ ಕೇಳಲು ಹಿತವಲ್ಲ.

ಉದಾಹರಣೆಗೆ ಕರ್ಣಪರ್ವದ ಶಲ್ಯನಾಗಿ ಕೃಷ್ಣನೊಂದಿಗೆ ಸಂಭಾಷಿಸುವಾಗ, ‘ಮರ ಹತ್ತುವವರು ಮೀನು ಹಿಡಿಯಬಾರದು. ಮೀನು ಹಿಡಿಯುವವರು ಮರ ಹತ್ತಬಾರದು’ ಎಂದು ಮಹಾಬಲರು ಹೇಳುತ್ತಿದ್ದರು. ಇದು ವೃತ್ತಿ ಮತ್ತು ಪ್ರವೃತ್ತಿಯ ವಿಶ್ಲೇಷಣೆ ಮಾಡುತ್ತ ತಿಳಿಹಾಸ್ಯದಿಂದ ಅವರು ಆಡಿದರೇ ಚೆಂದ. ಗನಗಾಂಪ, ಶುದ್ಧ ಟೊಣಪನಂತಹ ಪದಗಳನ್ನೂ ಬಳಸುತ್ತಿದ್ದರು. ಪರ್ವದ ಭೀಷ್ಮನಾಗಿ ಸಿಟ್ಟಿಗೆದ್ದ ಕೃಷ್ಣನನ್ನು ತಣಿಸುವಾಗ ‘ಸ್ವಲ್ಪ ಏರುಪಾಕ ಆಯಿತೋ ಹ್ಯಾಗೆ’ ಎನ್ನುತ್ತ ಛೇಡಿಸುತ್ತಿದ್ದರು. ಅಂದರೆ ಇಂಥ ಅನೇಕ ಪದಪುಂಜವನ್ನು ಯಕ್ಷಗಾನೀಯವಾಗಿ ಕಟ್ಟಿ ಕೊಡುವುದು ಅವರಿಗೆ ಮಾತ್ರ ಸಾಧ್ಯವಿತ್ತು. ಹೊಂಬಾಣ ದೀವಿಗೆ ಹಿಡಿದು ಅರ್ಧರಾತ್ರಿಯಲ್ಲಿ ತನ್ನ ಆಲಯಕ್ಕೆ ಬಂದ ಸುಯೋಧನನ್ನು ಕಂಡ ಮಹಾಬಲರ ಭೀಷ್ಮ, ಯಾರು ಎಂದು ಪ್ರಶ್ನಿಸಿ ‘ಮೇದಿನಿಪ ಬಾ ಎನುತ ...’ ಪದ್ಯದ ಎತ್ತುಗಡೆಗೆ ತೊಡಗಿದಾಗ ಎದೆ ಝಲ್ಲೆನ್ನುತ್ತಿತ್ತು. ವಿಜಯದ ಭೀಷ್ಮನಾಗಿ ‘ಸುತ್ತಲು ನೋಡುತ ಗಂಗಾ ತರಳನು’ ಎಂದು ದಿಟ್ಟಿಸಿದರೆ ಚಂಡ ಮಾರುತವೇ ಅಪ್ಪಳಿಸಿದಂತಾಗುತ್ತಿತ್ತು. ಸಂಧಾನದ ಕೌರವ, ಸುಭದ್ರಾ ಕಲ್ಯಾಣದ ಬಲರಾಮ, ರಕ್ತರಾತ್ರಿಯ ಅಶ್ವತ್ಥಾಮನಂತಹ ಮಹಾಬಲರ ಪಾತ್ರಗಳು ಮತ್ತೊಬ್ಬರಿಗೆ ಒಲಿದಿಲ್ಲ. ಅವರಿಂದ ಕಲಿತವರು ಅಷ್ಟನ್ನೇ ಮಾಡಿ ತೋರಿಸುವುದಕ್ಕೆ ಸೀಮಿತರಾಗಿದ್ದಾರೆ. ಹೊಸ ಮಾದರಿ ಸೃಷ್ಟಿ ಆಗಿಲ್ಲ.

ಮಹಾಬಲ ಹೆಗಡೆ ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದವರು. ಆದರೆ, ಸಂಜೆ ವೇಳೆ ಮನೆಯಲ್ಲಿ ಕುಳಿತು ಎಲೆಕ್ಟ್ರಾನಿಕ್ ಶ್ರುತಿ ಪೆಟ್ಟಿಗೆ ಇಟ್ಟುಕೊಂಡು ಹಾಡುವುದನ್ನು ಬಿಟ್ಟಿರಲಿಲ್ಲ. ಆಸಕ್ತರು ಹೋಗಿ ಮಾತಾಡಿಸಿದರೆ, ಕೊಂಚ ಹೊತ್ತಿನಲ್ಲಿ ಹಳೆಯ ನೆನಪಿಗೆ ಜಾರಿ ಲಹರಿಗೆ ಬರುತ್ತಿದ್ದರು. ತಮ್ಮಲ್ಲಿರುವ ಅನೇಕ ಸಂಗತಿಯನ್ನು ಮುಂದಿನ ತಲೆಮಾರಿಗೆ ಕೊಡಲು ಆಗಲಿಲ್ಲವೆಂಬ ಕೊರಗು ಅವರನ್ನು ಕಾಡುತ್ತಿತ್ತು. ಮಹಾಬಲ ಹೆಗಡೆ, ಶಂಭು ಹೆಗಡೆ ಜೋಡಿ ಯಕ್ಷಗಾನದಲ್ಲಿ ದಾಖಲಾದ ಅಮೃತ ಗಳಿಗೆ. ಶಂಭು ಹೆಗಡೆ ನಿಧರಾದಾಗಲೂ ತಮ್ಮ ಪುತ್ರ ರಾಮ ಹೆಗಡೆ ಮನೆ, ಅಳಿಕೆಯಲ್ಲಿ ಮಹಾಬಲರು ಇದ್ದರು. ತಮಗಿಂತ ಸುಮಾರು ೧೨ ವರ್ಷ ಕಿರಿಯ ಸಹೋದರ ಇಲ್ಲ ಎನ್ನುವುದನ್ನು ಅವರು ಒಪ್ಪಿಕೊಂಡೇ ಇರಲಿಲ್ಲ. ಈಗ ಅವರೂ ಕಾಲನ ಕರೆಯಾಲಿಸಿ ತೆರಳುವುದರೊಂದಿಗೆ ಶುದ್ಧ ಸೊಗಡಿನ, ಶಿಷ್ಟ ಸೊಬಗಿನ ಯಕ್ಷಗಾನದ ಅಭಿರುಚಿ ಮೂಡಿಸಿದ ಜೋಡಿ ಕಲಾ ಕ್ಷಿತಿಜದಿಂದ ಮರೆಯಾಗಿದೆ.

ಶಂಭು ಹೆಗಡೆ ತೀರಿಕೊಂಡಿದ್ದು ಇಡಗುಂಜಿ ತೇರಿನ ದಿನ ರಥ ಸಪ್ತಮಿಯಂದು. ಮಹಾಬಲ ಹೆಗಡೆ ಏಕಾದಶಿಯ ಶುಭ ಸಂದರ್ಭದಂದು ವೈಕುಂಠದತ್ತ ಪ್ರಯಾಣ ಬೆಳೆಸಿದ್ದಾರೆ. ಇದೂ ಒಂದು ಸುಯೋಗವೆಂದೇ ಭಾವಿಸೋಣ. ಕಲೆಯ ಉನ್ನತ ಮೌಲ್ಯದ ಪ್ರತಿಪಾದಕರಾದ ‘ಮಹಾಬಲ’ರಿಗೆ ಸದ್ಗತಿ ದೊರಯಲೆಂದು ನೆನೆಸುತ್ತ ಈ ಅಕ್ಷರಾಂಜಲಿ.
(ಮಹಾಬಲ ಹೆಗಡೆ ನಿಧನರಾದ ದಿನ ೨೯-೧೦-೨೦೦೯ ರಂದು ವಿಜಯ ಕರ್ನಾಟಕಕ್ಕಾಗಿ ಬರೆದಿದ್ದ ನುಡಿನಮನ)

Last Posts