ಪ್ರಜ್ವಲವಳ್ಳಿ ! ಯಕ್ಷಲೋಕದ ಗತ್ತು, ಗಾಂಭೀರ್ಯದ ಪ್ರತಿಮೆಗೆ ೭೮

ಜೋಯಿಸರ ಮನೆಯಲ್ಲಿ ಸದಾ ಯಕ್ಷಗಾನದ ಪಾರಾಯಣ. ರಾತ್ರಿ ಆಟ ನೋಡಿಕೊಂಡು ಬರುವ ಅವಭ್ರತರು ಮಾರನೆ ದಿನ ಮನೆಯಲ್ಲಿ ಕುಳಿತು ಪುಷ್ಕಳವಾಗಿ ಅರ್ಥಗಾರಿಕೆಯ ಪಟ್ಟಾಂಗ ಹೊಡೆಯುತ್ತಿದ್ದರು. ಇದನ್ನೆಲ್ಲ ಆಲಿಸುತ್ತಿದ್ದ ಮನೆಗೆಲಸದ ಹುಡುಗನಿಗೆ ರೋಮಾಂಚನ. ಅವನ ಮನದೊಳಗೆ ಪೌರಾಣಿಕ ಪಾತ್ರ ಪ್ರಪಂಚದ ರೂಪರೇಖೆ ಮೂಡಲಾರಂಭಿಸಿತು.
ಸಾಮಾನ್ಯ ಕುಟುಂಬದಿಂದ ಬಂದವನ ಈ ಆಸಕ್ತಿ ಕಂಡ ಜೋಯಿಸರಿಗೆ ಒಳಗೊಳಗೇ ಸಂಭ್ರಮ. ಆಟಕ್ಕೂ ಕರೆದುಕೊಂಡು ಹೋಗತೊಡಗಿದರು. ಒಂದು ದಿನ ಸನಿಹ ಕರೆದು, ‘ವೆಂಕ್ಟೇಶ ಕೂಲಿ ಮಾಡಿ ಆಯುಷ್ಯ ಕಳೆಯಬೇಡ. ನೀನು ವೇಷ ಮಾಡೋದೆ ಒಳ್ಳೇದು. ಒಳ್ಳೆಯ ಕಲಾವಿದ ಆಗ್ತೆ. ಹೊರಟು ಬಿಡು’ ಎಂದು ಅದು ತಮ್ಮ ಅಪೇಕ್ಷೆಯೋ ಎಂಬಂತೆ ಹರಸಿದರು. ಹಾಗಾಗಿ ಆತ ತಿರುಗಿ ಜಲವಳ್ಳಿ ಕಡೆ ಹೆಜ್ಜೆ ಹಾಕಿದ.
ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಜಲವಳ್ಳಿ ವೆಂಕಟೇಶರಾವ್ ಬಣ್ಣ ಹಚ್ಚಲು ಮುಹೂರ್ತ ಕೂಡಿ ಬಂದಿದ್ದು ಹೀಗೆ. ಮನೆಯಲ್ಲಿ ಜಮೀನು ಇಲ್ಲದಿದ್ದರಿಂದ ವೆಂಕಟೇಶ, ಮರವಂತೆ ಸನಿಹದ ದಿಬ್ಬಣಗಲ್‌ನ ರಾಮ ನಾಗಪ್ಪ ಅವಭ್ರತರ (ಅವಭ್ರತರಿಗೆ ಜೋಯಿಸರೆಂದೇ ಕರೆಯುತ್ತಿದ್ದರು) ಮನೆಯ ಕೆಲಸಕ್ಕೆ ಸೇರಿಕೊಂಡಿದ್ದರು. ಅಲ್ಲಿನ ವಾತಾವರಣ ಅವರ ಬದುಕಿನ ಗತಿಯನ್ನೇ ಬದಲಿಸುವುದಕ್ಕೆ ಯಕ್ಷಗಾನದ ಭಾಷೆಯಲ್ಲಿ 'ಗಣಪತಿ ಪೂಜೆ' ಮಾಡಿತು.
ಜಲವಳ್ಳಿಯ ಪರಿಸರವೂ ಯಕ್ಷಗಾನದಿಂದ ಸಮೃದ್ಧವಾಗಿತ್ತು. ಮನೆತನದಲ್ಲಿ ಯಾರೂ ಕಲಾವಿದರು ಇರಲಿಲ್ಲ. ಹೀಗಾಗಿ ಗೆಜ್ಜೆ ಕಟ್ಟುವುದಕ್ಕೆ ಪ್ರೋತ್ಸಾಹವಿರಲಿಲ್ಲ. ಆದರೆ ಜೋಯಿಸರು ಕೊಟ್ಟ ಸ್ಫೂರ್ತಿ, ಧೈರ್ಯ ಬೆನ್ನಿಗಿತ್ತು. ಉತ್ತರ ಕನ್ನಡದ ಕಲಾವಿದರೆಲ್ಲರ ಪಾಲಿಗೆ ಯಕ್ಷಗಾನದ ಮುಕ್ತ ವಿಶ್ವವಿದ್ಯಾಲಯವಾಗಿರುವ ಗುಂಡಬಾಳದಲ್ಲಿ ಜಲವಳ್ಳಿಯ ರಂಗ ಪ್ರವೇಶವಾಯಿತು. ಮೊದಲ ವೇಷ ಯೋಗಿನಿ ಕಲ್ಯಾಣದ ಪಾರ್ವತಿಯದ್ದು. ಅಲ್ಲಿಯೇ ರಂಗಕೃಷಿ ಮುಂದುವರಿಯುತ್ತಿದ್ದಾಗ, ಸೇವೆ ಆಟಕ್ಕೆ ಬಂದ ಕೆರೆಮನೆ ಶಿವರಾಮ ಹೆಗಡೆ, ಕೊಂಡದಕುಳಿ ಸಹೋದರರ ಮೆಚ್ಚುಗೆಯ ದೃಷ್ಟಿ ಬಿತ್ತು. ಕೊಂಡದಕುಳಿಯವರು ತಮ್ಮ ಮೇಳಕ್ಕೇ ಕರೆದುಕೊಂಡು ಹೋದರು.
ನಂತರ ಮೂರೂರು ದೇವರು ಹೆಗಡೆಯವರ ಮೇಳ, ಕೆರೆಮನೆ ಮೇಳದಲ್ಲೂ ತಿರುಗಾಟವಾಯಿತು. ಆ ಹೊತ್ತಿಗೆ ‘ನಮ್ಮ ಮಡಿವಾಳರ ವೆಂಕ್ಟೇಶ ಭಾರೀ ತಯಾರಾಗ್ತಾ ಇದ್ದ’ ಎಂಬ ಅಚ್ಚರಿ ಮಿಶ್ರಿತ ಅಭಿಮಾನದ ಮಾತು ಜಿಲ್ಲೆಯಾದ್ಯಂತ ಹರಿದಾಡತೊಡಗಿತ್ತು. ಮುಂದಿನದು ಕೊಳಗಿಬೀಸ್ ಮೇಳದಲ್ಲಿ ಚಿಟ್ಟಾಣಿ - ಜಲವಳ್ಳಿ ಜೋಡಿಯ ವೈಭವ. ಅಲ್ಲಿ ಖಳನಟನಾಗಿ, ಧೈತ್ಯ ವೇಷಧಾರಿಯಾಗಿ ಬೆಳೆಯಲು ಜಲವಳ್ಳಿಯವರಿಗೆ ಪೂರ್ಣ ಅವಕಾಶ ದೊರೆಯಿತು.
ಈ ಬೆಳವಣಿಗೆ ದಕ್ಷಿಣ ಕನ್ನಡದ ಸುರತ್ಕಲ್ ಮೇಳ, ಜಲವಳ್ಳಿಯವರತ್ತ ನೋಡುವಂತೆ ಮಾಡಿತು. ಆಟವೊಂದರ ಚೌಕಿಯಲ್ಲಿದ್ದ ವೆಂಕಟೇಶರನ್ನು ಉದ್ಯಾವರ ಬಸವ ಎನ್ನುವವ ಮುಸುಕು ಹಾಕಿಕೊಂಡು ಕೈಸನ್ನೆಯಿಂದಲೇ ಕರೆದು, ಮೇಳದ ಯಜಮಾನ ಕಸ್ತೂರಿ ವರದರಾಜ ಪೈ ಬಳಿಗೆ ಬರ ಹೇಳಿದ. ಪೈಗಳು ಕಾರಿನಲ್ಲಿ ಮಂಗಳೂರಿಗೇ ಕರೆದೊಯ್ದರು. ಸುರತ್ಕಲ್ ಮೇಳ ಕೈಹಿಡಿಯಿತು. ಆ ವರ್ಷ ಪಾಪಣ್ಣ ವಿಜಯದಲ್ಲಿ ಜಲವಳ್ಳಿಯವರ ಉಗ್ರಸೇನ ಮೇಲೆ ಬಿದ್ದ.
ಅಗ್ನಿ ಪರೀಕ್ಷೆ
ಸುರತ್ಕಲ್ ಮೇಳ ಸೇರಿದ ಎರಡನೇ ವರ್ಷ ಶೇಣಿ ಗೋಪಾಲಕೃಷ್ಣ ಭಟ್ಟರ ಆಗಮನದೊಂದಿಗೆ ನಿಜವಾದ ಅಗ್ನಿ ಪರೀಕ್ಷೆ ಎದುರಾಯಿತು. ಶೇಣಿ ಬರುವ ಸುದ್ದಿ ಕೇಳಿದ ಜಲವಳ್ಳಿಯವರಿಗೆ ಕಣ್ಣೀರು ಬಂದಿತ್ತಂತೆ. ಅವರೊಂದಿಗೆ ಪಾತ್ರ ಮಾಡುವುದು ಹೇಗೆಂಬ ಹೆದರಿಕೆ. ಸಾಲದ್ದಕ್ಕೆ ಶೇಣಿಯವರ ರಾಜಾ ವಿಕ್ರಮನಿಗೆ ಶನಿ ಪಾತ್ರಧಾರಿಯಾಗಿ ಜಲವಳ್ಳಿ ಬರುವಂತಾಯಿತು. ಶೇಣಿಯವರೇ ಧೈರ್ಯ ತುಂಬಿದ್ದರಿಂದ ಎಲ್ಲವೂ ಸುರಳೀತವಾಯಿತು. ಮುಂದಿನ ನಾಲ್ಕು ವರ್ಷ ಶೇಣಿಯವರ ಒಡನಾಟ ಸಿಕ್ಕಿತು. ಜಲವಳ್ಳಿ ಅಸಾಧಾರಣ ಮಾತುಗಾರರಾಗಿ ಬೆಳೆದಿದ್ದು, ತಾಳಮದ್ದಲೆಯ ಕೂಟದಲ್ಲೂ ಅರ್ಥಧಾರಿಯಾಗಲು ಈ ನಂಟು ಕೊಟ್ಟ ಕೊಡುಗೆ ದೊಡ್ಡದು. ಈ ಅವಧಿಯಲ್ಲಿ ಗತ್ತು, ಗಾಂಭೀರ್ಯದ ವೇಷ, ಸ್ವರಭಾರದ ಅರ್ಥದಿಂದ ದಕ್ಷಿಣ ಕನ್ನಡದ ಮಾತುಗಾರರ ಮೇಳದಲ್ಲಿ ಉತ್ತರ ಕನ್ನಡದ ಜಲವಳ್ಳಿ ಪ್ರತಿಷ್ಠಾಪನೆಗೊಂಡಿದ್ದರು. ಅಲ್ಲಿಯವರೂ ಅವರನ್ನು ಸ್ವೀಕರಿಸಿದ್ದರು.
ಇದ್ದಕ್ಕಿದ್ದ ಹಾಗೆ ಸಾಲಿಗ್ರಾಮ ಮೇಳದ ಯಜಮಾನ ಪಳ್ಳಿ ಸೋಮನಾಥ ಹೆಗ್ಡೆಯವರ ವರಾತದಿಂದ ಜಲವಳ್ಳಿ ಸುರತ್ಕಲ್ ಮೇಳಕ್ಕೆ ವಿದಾಯ ಹೇಳುವಂತಾಯಿತು. ಆಗ ‘ಜಲವಳ್ಳಿಯನ್ನು ಚೆನ್ನಾಗಿ ನೋಡಿಕೊಳ್ಳಿ. ನಿಮಗೆ ಬೇಡವೆಂದಾದರೆ ನಮ್ಮಲ್ಲಿಗೇ ಕಳುಹಿಸಿ’ ಎಂಬ ಹಕ್ಕೊತ್ತಾಯವನ್ನು ಪೈಗಳು ಸಲ್ಲಿಸಿದ್ದರಂತೆ. ಅದರಂತೆಯೇ ನಡೆಸಿಕೊಂಡ ಸಾಲಿಗ್ರಾಮ ಮೇಳ, ಜಲವಳ್ಳಿ ಅವರಿಂದ ೨೪ ವರ್ಷಗಳ ಸುದೀರ್ಘ ಸೇವೆ ಪಡೆದಿದೆ.
ಸದ್ಯ ವಯೋವೃದ್ಧ ಜಲವಳ್ಳಿ ಅಜ್ಜ, ಪೆರ್ಡೂರು ಮೇಳದಲ್ಲಿದ್ದಾರೆ. ಅವರಿಗೀಗ ೭೮ ವರ್ಷ. ಈ ಪ್ರಾಯದಲ್ಲೂ ಅವರು ರಂಗಕ್ಕೆ ಅಡಿಯಿಟ್ಟರೆ ಒಂದೊಂದು ಹೆಜ್ಜೆಗೆ ಮಣಭಾರದಷ್ಟು ತೂಕದ ಗಾಂಭೀರ್ಯ. ಅರ್ಥ ಹೇಳಿದರೆ ಗಂಟೆ ಮೊಳಗಿದಷ್ಟು ಸ್ಪಷ್ಟ. ಸಾರ್ಥಕ ಯಕ್ಷಜೀವನ ಕಂಡ ಜಲವಳ್ಳಿಯವರಿಗೆ ರಾಜಧಾನಿಯಲ್ಲಿ ಸನ್ಮಾನವಾಗುತ್ತಿದೆ. ಹೀಗಾಗಿ ಅವರೆಡೆಗಿನ ಕಿರುನೋಟದ ಈ ಅಕ್ಷರಾಕ್ಷತೆಯ ಅಭಿನಂದನೆ.

ಜನ್ಮಜಾತ ಪ್ರಭೆ
ಯಕ್ಷಗಾನ ಕಲಾವಿದರಿಗೆ ಅವರಿಗೆ ಹೊಂದದ ಏನೇನೋ ಬಿರುದು ಬಾವಲಿ ಕೊಡುವುದುಂಟು. ಆದರೆ, ಜಲವಳ್ಳಿಯವರು ನಿಜ ಅರ್ಥದಲ್ಲಿ ಅಭಿಜಾತ (ಜನ್ಮಜಾತ) ಕಲಾವಿದ. ಅವರಿಗೆ ೨ ನೇ ತರಗತಿ ವರೆಗಿನ ವಿದ್ಯಾಭ್ಯಾಸವಾದ ಬಗ್ಗೆ ದಾಖಲೆಯಿದೆ. ಸರಿಯಾಗಿ ಓದುವುದಕ್ಕೆ ಬಾರದು. ತೀರ ಇತ್ತೀಚಿನ ವರೆಗೂ ಹೆಬ್ಬಟ್ಟು ಒತ್ತುತ್ತಿದ್ದರು. ಹಾಗಾಗಿ ಪುಸ್ತಕ ಓದಿ, ಅಧ್ಯಯನದಿಂದ ಅರ್ಥಗಾರಿಕೆಯ ಸಿದ್ಧಿಯನ್ನು ಗಳಿಸಿಕೊಂಡದ್ದಲ್ಲ. ಕೆಳವರ್ಗದಲ್ಲಿ ಹುಟ್ಟಿ ಬೆಳೆದ ವ್ಯಕ್ತಿಯೊಬ್ಬ ಪ್ರಾಥಮಿಕ ಹಂತದ ವ್ಯಾಸಂಗವನ್ನೂ ಪೂರೈಸದೆ ಭೌದ್ಧಿಕ ಸಂಸ್ಕಾರಕ್ಕೆ ಸಂಬಂಧಿಸಿದ ಅರ್ಥಗಾರಿಕೆಯಲ್ಲಿ ಇಷ್ಟು ಎತ್ತರವೇರಿದ್ದು ಸಣ್ಣ ಮಾತಲ್ಲ. ಶೇಣಿ, ಸಾಮಗರೊಂದಿಗೆ ಅರ್ಥ ಹೇಳಿ ಅವರ ವೈಚಾರಿಕ ಮಂಥನಕ್ಕೆ ಸಹಜ ಸಂವಾದಿಯಾಗಿದ್ದು ಜಲವಳ್ಳಿ ಶ್ರೇಷ್ಠತೆ. ಇದೆಲ್ಲ ಹೇಗಾಯಿತು ಎಂಬ ಬಗ್ಗೆ ಈಗಲೂ ಅನೇಕರಿಗೆ ವಿಸ್ಮಯವಿದೆ. ಜಲವಳ್ಳಿಯವರೂ ಬಾಹ್ಯಲೋಕದಲ್ಲಿ ಬಾಯಿಗೆ ಬಾರದ, ಆಡಲು ಗೊತ್ತಾಗದ ಎಷ್ಟೋ ಶಬ್ದಗಳು ರಂಗಸ್ಥಳದಲ್ಲಿ ತಾನಾಗಿಯೇ ಹೊಳೆಯುತ್ತವೆ ಎನ್ನುತ್ತಾರೆ. ಹೀಗಾಗಿ ಜಲವಳ್ಳಿ ಯಕ್ಷಗಾನದ ಅತ್ಯಮೂಲ್ಯ ನಿಧಿ. ಅವರದ್ದು ಜನ್ಮಜಾತ ಪ್ರತಿಭೆ/ ಪ್ರಭೆ ಎನ್ನುವುದೇ ಹೆಚ್ಚು ಸೂಕ್ತ.
ಪಾತ್ರಗಳು
ಕೆರೆಮನೆ ಮಹಾಬಲ ಹೆಗಡೆಯವರ ನಂತರ ಉತ್ತರ ಕನ್ನಡದಲ್ಲಿ ಆ ತಲೆಮಾರಿನ ಪೈಕಿ ಜಲವಳ್ಳಿ ಅತ್ಯಂತ ಹಿರಿಯ ಕಲಾವಿದ. ಕೆರೆಮನೆ ಸಹೋದರರು, ಚಿಟ್ಟಾಣಿ ಅವರಂತೆ ಪ್ರತ್ಯೇಕ ಅಸ್ತಿತ್ವದಿಂದ ಗುರುತಿಸಿಕೊಂಡವರು. ಜಲವಳ್ಳಿ ಅವರಂತೆ ಖಳವೇಷದ ಚಿತ್ರಣ ಮಾಡಿದವರು ಮತ್ತೊಬ್ಬರು ಇರಲಿಕ್ಕಿಲ್ಲ. ಅದಕ್ಕೆ ಬೇಕಾದ ಆಳ್ತನ, ಎತ್ತರ, ಸ್ವರ ಗಾಂಭೀರ್ಯ, ನೋಟದಿಂದಲೇ ರೌದ್ರತೆ ಸೃಷ್ಟಿಸುವ ಕಣ್ಣುಗಳು ಅವರ ದೈವದತ್ತ ಆಸ್ತಿ. ಆರಂಭದಲ್ಲಿ ಬಡಗಿನ ಸಾಂಪ್ರದಾಯಿಕ ಹೆಜ್ಜೆ ಗೊತ್ತಿದ್ದರೂ, ತೆಂಕಿಗೆ ಹೋದ ಮೇಲೆ ಕೇವಲ ಸುತ್ತು, ಗತ್ತು, ಮಾತಿಗೆ ಒತ್ತು ಕೊಟ್ಟರು ಎನ್ನುವವರಿದ್ದಾರೆ. ಅದು ನಿಜವೆಂದು ಒಪ್ಪಬಹುದಾದರೂ, ಜಲವಳ್ಳಿ ಎನ್ನುವ ಛಾಪು ಮೂಡಿದ್ದೇ ಈ ಬಗೆಯ ಹದವರಿತ ಮೇಳೈಕ್ಯದಿಂದ. ಅದರಿಂದಲೇ ಜಲವಳ್ಳಿಯೊಳಗಿನ ಜಗಜಟ್ಟಿ ಕಲಾವಿದ ಹೊರಹೊಮ್ಮಿದ್ದು. ಮೀಸೆ ಹಚ್ಚುವುದರಿಂದ ಬಣ್ಣಗಾರಿಕೆಯಲ್ಲೂ ಅವರಿಗೆ ತುಂಬ ಕಾಳಜಿ. ಇತರರ ಬಣ್ಣ ಕೆಟ್ಟರೂ ಸಹಿಸುವುದಿಲ್ಲ.
ಜಲವಳ್ಳಿ ಎಂದರೆ ಶನೀಶ್ವರನ ಪಾತ್ರ ಹೆಚ್ಚಿನವರಿಗೆ ನೆನಪಾಗುತ್ತದೆ. ಭಕ್ತಿ ಪ್ರಧಾನ ಆಖ್ಯಾನದಿಂದ ಈ ವೇಷ ಅಚ್ಚೊತ್ತಿರಬಹುದು. ಆದರೆ ಭೀಮ, ಅಶ್ವತ್ಥಾಮ, ರಾವಣ, ರಕ್ತಜಂಘ, ವಲಲ, ವಿಜಯದ ಭೀಷ್ಮ, ಕಂಸ, ಮಾಗದ, ಭಸ್ಮಾಸುರ ಮೋಹಿನಿಯ ಈಶ್ವರ ಇನ್ನೂ ಅನೇಕ ಪಾತ್ರಗಳು ಪರಿಣಾಮಕಾರಿಯಾಗಿ ಸ್ಥಾಪನೆಗೊಂಡಿವೆ. ಕಾಳಿಂಗ ನಾವುಡರ ನಾಗಶ್ರೀ ಪ್ರಸಂಗದ ಸುದರ್ಶನ ಸೇರಿದಂತೆ ಹೊಸ ಕತೆಗಳ ಪಾತ್ರಗಳಿಗೂ ಜಲವಳ್ಳಿ ವೈಶಿಷ್ಟ್ಯ ಬೆಸೆದುಕೊಂಡಿದೆ.

ಶೇಣಿ ಒಡನಾಟ
ಶೇಣಿ ಗೋಪಾಲಕೃಷ್ಣ ಭಟ್ಟರ ಪೂರ್ಣ ಪ್ರೀತಿ, ವಿಶ್ವಾಸ ಜಲವಳ್ಳಿಯವರಿಗೆ ದಕ್ಕಿತ್ತು. ಅರ್ಥ ಹೇಳುವ ಸಾಧ್ಯತೆ ಇರುವುದನ್ನು ಅರಿತ ಶೇಣಿಯವರು ಪ್ರೋತ್ಸಾಹಿಸಿದರಂತೆ. ಒಬ್ಬರು ಹೇಳಿದ್ದು ಒಪ್ಪಿತವಾದರೆ ನಾನು ಕೇಳುತ್ತೇನೆ ಎನ್ನುವ ಜಲವಳ್ಳಿ, ಶೇಣಿಯವರ ಮಾತಿಗೆ ಕಿವಿಯಾದರಂತೆ. ಅವರು ಹೇಳುತ್ತಿದ್ದುದನ್ನು ತಮ್ಮ ಶೈಲಿಗೆ ತಂದುಕೊಂಡರಂತೆ. ಸುರತ್ಕಲ್ ಮೇಳದಲ್ಲಿ ಶೇಣಿ, ಜಲವಳ್ಳಿಯ ವಾಲಿ-ಸುಗ್ರೀವ, ಕೌರವ-ಭೀಮನ ಜೋಡಿಯೂ ಜನಪ್ರಿಯವಾಗಿತ್ತಂತೆ. ಕೃಷ್ಣಲೀಲೆಯಲ್ಲಿ ಕಂಸನ ಪಾತ್ರವನ್ನು ಜಲವಳ್ಳಿ ಅವರಿಂದಲೇ ಶೇಣಿ ಮಾಡಿಸುತ್ತಿದ್ದರಂತೆ. ಆಗ ಅವರು ವಸುದೇವ/ ಅಕ್ರೂರನಾಗಿ ಬಂದು ಒದಗುತ್ತಿದ್ದರಂತೆ.
ಒಮ್ಮೆ ಯಾವುದೋ ಕ್ಯಾಂಪ್ನಲ್ಲಿ ಶೇಣಿಯವರಿಗೆ ಜಲವಳ್ಳಿ ಚಹಾ ತಂದು ಕೊಟ್ಟರಂತೆ. ತಕ್ಷಣನೀನು ನನ್ನ ಮೇಲಿನ ಗೌರವದಿಂದ ಸಣ್ಣವನಾಗಬೇಡ. ಪ್ರವರ್ದಮಾನಕ್ಕೆ ಬಂದಿರುವ ಕಲಾವಿದ. ಇದನ್ನು ನೋಡಿದ ಜನ ಶೇಣಿಯವರಿಗೆ ಚಹಾ ತಂದು ಕೊಡುತ್ತಾನೆ ಎಂದು ಹಗುರ ಮಾಡುತ್ತಾರೆ. ಹಾಗಾಗುವುದು ಬೇಡಎಂದು ಎಚ್ಚರಿಸಿದರಂತೆ. ಇನ್ನೊಮ್ಮೆ ಸಹ ಕಲಾವಿದರೊಬ್ಬರು ಹಚ್ಚಿಕೊಂಡಿದ್ದ ಸಿಗರೇಟಿನ ಕಿಡಿ, ಶೇಣಿಯವರ ಶುಭ್ರ ಶ್ವೇತ ವರ್ಣದ ನಿಲುವಂಗಿಗೆ ಬಡಿದು ಸಣ್ಣ ರಂಧ್ರವಾಯಿತಂತೆ. ಶೇಣಿಯವರು ಅಂಗಿ ಬಿಚ್ಚಿ ಬೇರೊಬ್ಬರಿಗೆ ಕೊಟ್ಟರಂತೆ. ಆಗ ಸಿಗರೇಟು ಉರಿಸುತ್ತಿದ್ದ ಕಲಾವಿದ, ‘ಶೇಣಿಯವರೇ ಅಂಗಿಯನ್ನು ನಿಮ್ಮ ನೆಚ್ಚಿನ ಜಲವಳ್ಳಿಗೇ ಕೊಡಬಹುದಿತ್ತಲ್ಲಎಂದು ಅಳುಕುತ್ತಲೇ ಹೇಳಿದರಂತೆ. ಶೇಣಿಯವರು, ‘ಕೊಡಬಹುದಿತ್ತು. ಅದು ನನಗೂ ಗೊತ್ತು. ಆದರೆ ಕ್ರಮ ಹಾಗಲ್ಲ. ಜಲವಳ್ಳಿಗೆ ನಾನು ತೊಟ್ಟು ಬಿಟ್ಟದ್ದಲ್ಲ. ಅವನಿಗೆ ಅಂಗಡಿಗೆ ಕರೆದುಕೊಂಡು ಹೋಗಿ ಹೊಸದನ್ನೇ ಕೊಡಿಸುತ್ತೇನೆಎಂದವರು ಹಾಗೆಯೇ ಮಾಡಿದರಂತೆ. ಹೀಗೆ ಶೇಣಿಯವರ ಒಡನಾಟದ ಬಗ್ಗೆ ಮೆಲುಕು ಹಾಕುವಾಗ ಜಲವಳ್ಳಿಯವರಿಗೆ ಕಣ್ಣೀರು ಒತ್ತರಿಸಿ ಬಂದಿತ್ತು.

ಸನ್ಮಾನ, ಪ್ರದರ್ಶನ
ಹತ್ತು ಹಲವು ಕಲಾವಿದರನ್ನು ದೊಡ್ಡ ಮಟ್ಟದಲ್ಲಿ ಗೌರವಿಸಿದ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ವಿ.ಆರ್. ಹೆಗಡೆ ಹೆಗಡೆಮನೆಯವರ ನೇತೃತ್ವದ ಯಕ್ಷಗಾನ ಯೋಗಕ್ಷೇಮ ಅಭಿಯಾನ ಹಾಗೂ ಅಗ್ನಿ ಸೇವಾ ಟ್ರಸ್ಟ್ ಸಹಯೋಗದಲ್ಲಿ ಜಲವಳ್ಳಿಯವರಿಗೆ ಸನ್ಮಾನ, ನಿಧಿ ಸಮರ್ಪಣೆ ಆಗುತ್ತಿದೆ. ಇಂದು ರಾತ್ರಿ (೨೮-೦೮-೨೦೧೦ ಶನಿವಾರ) ೧೦.೩೦ ಕ್ಕೆ ಆರಂಭವಾಗುತ್ತದೆ. ಇದೇ ವೇಳೆ ಪೆರ್ಡೂರು ಮೇಳ ಹಾಗೂ ಅತಿಥಿ ಕಲಾವಿದರಿಂದ ಕಾರ್ತವೀರ್ಯಾರ್ಜುನ, ಕರ್ಣಾರ್ಜುನ ಪ್ರದರ್ಶನವಾಗಲಿದೆ.

ಪಟಾಪಟ್ ಸಂದರ್ಶನ
ಪ್ರಶ್ನೆ : ಯಕ್ಷಗಾನ ಕಲಾವಿದರಾಗದಿದ್ದರೆ ನಿಮ್ಮ ಭವಿಷ್ಯವೇನಾಗುತ್ತಿತ್ತು ?
ಉತ್ತರ : ಇದೊಂದು ಯೋಗ. ಇಲ್ಲದಿದ್ದರೆ ಎಲ್ಲಿಯೋ ಕೂಲಿ ಮಾಡಿಕೊಂಡು ಇರುತ್ತಿದ್ದೆ.
ಪ್ರಶ್ನೆ : ಇಷ್ಟು ದೊಡ್ಡ ಅರ್ಥಧಾರಿಯಾಗಿದ್ದು ಹೇಗೆ ?
ಉತ್ತರ : ಅದು ನನಗೂ ಗೊತ್ತಿಲ್ಲ. ಈಗೀಗ ಸ್ವಲ್ಪ ಓದಲು ಕಲಿತಿದ್ದೇನೆ. ಬರೆಯುವುದಕ್ಕೆ ಆಗುವುದಿಲ್ಲ. ರಂಗದಲ್ಲಿ ಅದ್ಯಾವುದೋ ಪ್ರೇರಣೆ ಬರುತ್ತದೆ.
ಪ್ರಶ್ನೆ : ಚಿಟ್ಟಾಣಿಯವರ ಜತೆಗೆ ವೇಷ ಮಾಡಿದ ಅನುಭವ ಹೇಳಿ.
ಉತ್ತರ : ಅವರ ಜತೆ ನನ್ನದು ಎಷ್ಟೋ ಜೋಡಿ ವೇಷವಾಗಿದೆ. ಬಗ್ಗೆ ಹೆಮ್ಮೆಯಿದೆ. ಅದು ಯಕ್ಷಗಾನ ಪ್ರಪಂಚಕ್ಕೆಲ್ಲ ತಿಳಿದಿದೆ. ಅವರ ಕುರಿತು ಗೌರವವೂ ಇದೆ.
ಪ್ರಶ್ನೆ : ಶಂಭು ಹೆಗಡೆಯವರ ಜತೆ ವೇಷ ಮಾಡಿದ್ದಿರಾ ?
ಉತ್ತರ : ಶಂಭು ಹೆಗಡೇರು ಸಾಲಿಗ್ರಾಮ ಮೇಳ ಬಿಟ್ಟ ಮೇಲೆ ಒಮ್ಮೆ ವಿಶೇಷ ಸಂದರ್ಭದಲ್ಲಿ ಅವರನ್ನು ಅತಿಥಿಯಾಗಿ ಕರೆದಿದ್ದರು. ಅವರ ಕಾರ್ತವೀರ್ಯ, ನನ್ನ ರಾವಣ ಆಗಿತ್ತು. ಸಂಘಟಕರಿಗೆ ಭರ್ಜರಿ ಕಲೆಕ್ಷನ್ ಬಂದಿತ್ತು. ಮತ್ತೊಮ್ಮೆ ಅವರ ಗದಾಪರ್ವದ ಕೌರವ, ನನ್ನ ಭೀಮನ ಪಾತ್ರ ಮಾಡುವ. ಸಮಯ ಬರಲಿ. ಹೇಳ್ತೆ ಎಂದಿದ್ದರು. ದಿನ ಕಡೆಗೂ ಬರಲೇ ಇಲ್ಲ.
ಪ್ರಶ್ನೆ : ನಿಮ್ಮ ಮಗ ವಿದ್ಯಾಧರ ಅವರ ಭವಿಷ್ಯದ ಬಗ್ಗೆ ಹೇಳಿ.
ಉತ್ತರ : ಅವನಿಗೆ ನನಗಿಂತ ಉತ್ತಮ ಅವಕಾಶವಿದೆ. ಯಾವುದೇ ವಿಕಾರವಿಲ್ಲದ ಶುದ್ಧ ಉತ್ತರ ಕನ್ನಡ ಶೈಲಿಯ ಕುಣಿತ ವಿದ್ಯಾಧರನಿಗೆ ಗೊತ್ತಿದೆ. ವೃತ್ತಿಯ ಶಿಸ್ತು ರೂಢಿಸಿಕೊಳ್ಳಬೇಕು. ಸುಧಾರಣೆಯಾಗಬೇಕು. ನನಗೆ ಅವನದ್ದೇ ದೊಡ್ಡ ಚಿಂತೆಯಾಗಿದೆ.
ಪ್ರಶ್ನೆ : ಇನ್ನೂ ಆಟ ಕುಣಿತೀರಾ ?
ಉತ್ತರ : ತಿರುಗಾಟ ಸಾಗಿದೆ. ವೇಷ ಮಾಡಿಕೊಂಡಾಗ ಒಂದೊಂದು ಸಲ ತಲೆಸುತ್ತು ಬರುತ್ತದೆ. ಹೀಗಾಗಿ ಹೆಚ್ಚು ಕಿರೀಟವಿಲ್ಲದ ವೇಷ ಆಯ್ದುಕೊಳ್ಳುತ್ತಿದ್ದೇನೆ. ಏನಿದ್ದರೂ ಆರೋಗ್ಯದ ಮೇಲೆ ಅವಲಂಬಿಸಿದೆ.
('ವಿಜಯ ಕರ್ನಾಟಕ' 'ಲವಲವಿಕೆ'ಯಲ್ಲಿ ಈ ಲೇಖನ ಪ್ರಕಟವಾಗಿದೆ. ಇಲ್ಲಿ ಜಲವಳ್ಳಿಯವರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಸೇರಿಸಲಾಗಿದೆ)

ಸಾವಿರ ಮಂಟಪ ಕಟ್ಟಿದ ಪ್ರಭಾಕರ


ಹೆಣ್ಣಿನ ಸೂಕ್ಷ್ಮ ಸಂವೇದನೆ ತೆರೆದಿಟ್ಟ ಗಂಡು ಸಾಹಸ
ಕರಾವಳಿಯ ಆ ಹುಡುಗ ಯೌವ್ವನದ ಉತ್ತುಂಗ ಶಿಖರ ಏರುತ್ತಿದ್ದ. ಸ್ತ್ರೀವೇಷ ಮಾಡಿಕೊಂಡು ರಂಗಸ್ಥಳಕ್ಕೆ ಹೋದರೆ ಯಾರಾದರೂ ಹಾರಿಸಿಕೊಂಡು ಹೋಗುವಂತಹ ಮೋಹಕ ರೂಪ. ಬೆನ್ನಿಗೆ ಅಂಟಿಕೊಂಡಿದ್ದ ಸ್ಟಾರ್ ಪಟ್ಟವೆಂಬ ಭ್ರಮೆ. ಎಲ್ಲಿಯೇ ಆಟವಾದರೂ ಮಂಟಪ ಬಂದ ದಾರಿ ಬಿಡಿ... ಎನ್ನುವಷ್ಟು ಜನಪ್ರಿಯತೆ.

ನಿಜಕ್ಕೂ ಅಂದು ಯಕ್ಷಗಾನಕ್ಕೆ ಬೇಕಾದ ದಂತದ ಗೊಂಬೆಯಂಥ ಅಂಗಸೌಷ್ಠವದ ಕಲಾವಿದ ಸಿಕ್ಕಿದ್ದ. ಅವನ ಅವಶ್ಯಕತೆ ಯಕ್ಷಗಾನದವರಿಗೂ ಇತ್ತು. ಆದರೆ, ಕಲಾವಿದನಿಗೆ ತನ್ನ ಬದುಕಿನ ಪಥ ಬದಲಿಸಿಕೊಳ್ಳುವ ಪ್ರಜ್ಞೆ ಜಾಗೃತವಾಗಿತ್ತು. ಹೀಗಾಗಿ ರಂಗದಿಂದಲೇ ವಿಮುಖನಾಗಿ ಬೆಂಗಳೂರು ಬಸ್ ಹತ್ತಿದ. ಆಗ ಅವನ ಕಿವಿಯಲ್ಲಿ ತಾನು ಕುಣಿದು ದಣಿಯುತ್ತಿದ್ದಾಗ ಪ್ರೇಕ್ಷಕರು ಹಾಕುತ್ತಿದ್ದ ಶಿಳ್ಳೆ, ಚಪ್ಪಾಳೆಗಳು ರಿಂಗಣಿಸುತ್ತಿದ್ದವು.

ಆದರೆ, ತಿರುಗಿ ಮೇಳಕ್ಕೆ ಹೋಗಿ ಬಿಡಲೇ ಎನ್ನುವ ದಂದ್ವವಿರಲಿಲ್ಲ. ಅವಡುಗಚ್ಚಿ ಇಷ್ಟಪಟ್ಟ ಉದ್ಯೋಗದಲ್ಲಿ ಬೆವರು ಸುರಿಸಿ ದುಡಿದ. ಮತ್ತೆ ಹತ್ತು ವರ್ಷ ವೃತ್ತಿರಂಗಕ್ಕೆ ಕಾಲಿಡಲೇ ಇಲ್ಲ. ಯಶಸ್ವಿ ಉದ್ಯಮಿಯೂ ಆದ. ‘ಮಂಟಪ ಐಸ್‌ಕ್ರೀಮ್’ ಮನೆಮಾತಾಯಿತು. ಕರಾವಳಿ, ಮಲೆನಾಡಿನವರು ಓಹೋ ನಮ್ಮ ಮಂಟಪರು... ಎನ್ನತೊಡಗಿದರು. ಇದು ಉಡುಪಿ ಜಿಲ್ಲೆಯ ಸಾಲಿಗ್ರಾಮದ ಪಾರಂಪಳ್ಳಿಯ (ಪಡುಕೆರೆ) ಸಾಮಾನ್ಯ ಕುಟುಂಬದ ಮಂಟಪ ಪ್ರಭಾಕರ ಉಪಾಧ್ಯರ ಬೆಳವಣಿಗೆಯ ಮೊದಲ ಹಂತ. ಮಂಟಪ ಬೆಂಗಳೂರಿನತ್ತ ಪ್ರಯಾಣ ಬೆಳೆಸದಿದ್ದರೆ, ಕೈಚಪ್ಪಾಳೆಯಲ್ಲಿ ತೇಲಿಹೂಗುವ ಸಾಧ್ಯತೆಯೇ ಜಾಸ್ತಿ ಇತ್ತು.

ಐಸ್‌ಕ್ರೀಮ್ ಅಂಗಡಿಯ ಮಾಲಕನಾಗಿ ನೆಲೆ ಕಂಡುಕೊಂಡ ಮಂಟಪ, ಪುನಃ ಗೆಜ್ಜೆ ಕಟ್ಟಿದರು. ೧೯೯೦ ರಿಂದ ೧೯೯೩ ರ ವರೆಗೆ ಚಿಟ್ಟಾಣಿಯವರ ಬಚ್ಚಗಾರು ಮೇಳದಲ್ಲಿ ಅತಿಥಿ ಸ್ತ್ರೀವೇಷಧಾರಿಯಾಗಿ ಅಕ್ಷರಶಃ ಮಿಂಚಿದರು. ಉದ್ಯಮ ಕ್ಷೇತ್ರದಲ್ಲಿದ್ದಾಗಲೂ ಕಲೆಯೆಡೆಗಿನ ಅಂತರ್ಗತವಾದ ಸೆಳೆತ, ಚಿಂತನೆಯಿಂದ ದೂರ ಸರಿದಿರಲಿಲ್ಲ.

ಹೀಗಾಗಿ ಪುನರಾಗಮನದಲ್ಲೂ ಮಂಟಪರ ಅಲೆ ಮೋಡಿಗೈಯ್ದಿತು. ಪ್ರೇಕ್ಷಕರು ಮಂಟಪರೇ ಮೋಹಿನಿ, ಮೇನಕೆ, ಚಿತ್ರಾಕ್ಷಿ, ಋಚಿಮತಿಯಾಗಿ ಬರಬೇಕೆಂದು ವರಾತ ತೆಗೆದರು. ವೈವಿಧ್ಯಮಯ ಪಾತ್ರ ನಿರ್ವಹಿಸಬೇಕೆಂಬ ಇಚ್ಛೆಯಿದ್ದರೂ ಜನ ಬಯಸುತ್ತಿದ್ದುದು ಶೃಂಗಾರ ಪ್ರಧಾನ ಹಾಗೂ ದಿಗಡದಿಮ್ಮಿಯಂಥ ವೇಷಗಳಲ್ಲೇ. ಮಂಟಪರೇ ಹೇಳುವಂತೆ ಅವರಿಗಾಗ ಆತ್ಮ ತೃಪ್ತಿಯಾಗಲಿಲ್ಲ. ತಮಗಾಗಿ ಕುಣಿಯಲಾರದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಮತ್ತೊಮ್ಮೆ ಬಣ್ಣ ಒರೆಸಿ ಉದ್ಯಮದೆಡೆಗೆ ಗಮನ ಕೊಟ್ಟರು.

ಹೊಸ ತಿರುವು, ಏಕವ್ಯಕ್ತಿಗೆ ನಾಂದಿ
ಆ ಹೊತ್ತಿಗೆ ಉತ್ತರ ಕನ್ನಡಕ್ಕೆ ಶತಾವಧಾನಿ ಡಾ.ಆರ್. ಗಣೇಶ್ ಅವರ ಆಗಮನವಾಗಿತ್ತು. ಶಿರಸಿ, ಕುಮಟಾ, ಯಲ್ಲಾಪುರ, ಸಿದ್ದಾಪುರ ಭಾಗದಲ್ಲಿ ಶತಾವಧಾನದ ಕಾರ್ಯಕ್ರಮ ಜೇನಿನ ಹನಿಯಂತೆ ಜಿನುಗಲಾರಂಭಿಸಿತ್ತು. ಅವಧಾನದೊಂದಿಗೆ ಕಾವ್ಯ-ಚಿತ್ರ-ಯಕ್ಷನೃತ್ಯವೆಂಬ ವಿನೂತನ ಪ್ರಯೋಗವೂ ಡಾ. ಗಣೇಶರ ಕಲ್ಪನೆಯಲ್ಲಿ ಬಂತು. ಅಲ್ಲಿಂದ ಮಂಟಪರ ಕಲಾ ಜೀವನಕ್ಕೆ ಬೇರೊಂದು ತಿರುವು ಸಿಕ್ಕಿತು. ಅವರೊಳಗಿನ ಹೆಣ್ಣು ಅರಳಿದ್ದು ಆವಾಗಲೇ. ಮೊದಲ ಮಳೆಗೆ ಹದಗೊಂಡ ಭೂಮಿಯಿಂದ ವರತೆ ಚಿಮ್ಮುವಂತೆ ‘ಏಕವ್ಯಕ್ತಿ ಯಕ್ಷಗಾನ’ವೆಂಬ ಪರಿಕಲ್ಪನೆ ಮೂರ್ತ ಸ್ವರೂಪ ಪಡೆದುಕೊಂಡಿತು.

ಶಿರಸಿಯ ಭೈರುಂಬೆಯಲ್ಲಿ ೨೦೦೦ ನೇ ಇಸವಿಯಲ್ಲಿ ಪ್ರಾರಂಭಗೊಂಡ ಏಕವ್ಯಕ್ತಿ ಪ್ರಯೋಗ ನಂತರ ನಾಡಿನ ಉದ್ದಗಲಕ್ಕೂ ಪ್ರದರ್ಶನಗೊಂಡಿದೆ. ಇದಕ್ಕೆ ಶಿಲೆ ಮಂಟಪ. ಶಿಲ್ಪಿ ಡಾ. ಗಣೇಶ್. ಜತೆಯಾಗಿ ಹಿಮ್ಮೇಳ ಒದಗಿಸಿದವರು ವಿದ್ವಾನ್ ಗಣಪತಿ ಭಟ್ (ಭಾಗವತರು), ಅನಂತಪದ್ಮನಾಭ ಪಾಠಕ್ (ಮದ್ದಲೆ), ಕೃಷ್ಣಯಾಜಿ ಇಡಗುಂಜಿ (ಚೆಂಡೆ). ಕೊಳಲುವಾದಕ ಎಚ್.ಎಸ್. ವೇಣುಗೋಪಾಲ್ ಸಾಂದರ್ಭಿಕವಾಗಿ ನೆರವಾಗಿದ್ದಾರೆ. ವೇಷಭೂಷಣ ಸಹಕಾರ ರಾಜಶೇಖರ ಹಂದೆ ಅವರದ್ದು. ಶಿಲೆಗೆ ಶಿಲ್ಪಿ ಎಂದೂ ವೈರಿಯಾಗಲಾರ ಎಂಬ ಮಾತಿನಂತೆ, ಮಂಟಪರನ್ನು ತಿದ್ದಿ ತೀಡಿದ ಶತಾವಧಾನಿ ಗಣೇಶ್, ಯಕ್ಷಗಾನದಲ್ಲಿ ಹೊಸ ಇತಿಹಾಸ ನಿರ್ಮಾಣಕ್ಕೆ ಕಾರಣಕರ್ತೃರಾದರು. ಹೀಗಾಗಿ ಮಂಟಪ, ಏಕವ್ಯಕ್ತಿಯ ಸಾವಿರದ ಪ್ರಯೋಗದತ್ತ ದಾಪುಗಾಲಿಟ್ಟಿದ್ದಾರೆ. ಈ ಸಂಭ್ರಮಕ್ಕೆ ಮೂಡಬಿದ್ರೆಯ ವಿದ್ಯಾಗಿರಿ ತೋರಣ ಕಟ್ಟಿಕೊಳ್ಳುತ್ತಿದೆ.

ಹೆಣ್ಣಿನ ಸೂಕ್ಷ್ಮ ಸಂವೇದನೆಯನ್ನು ತೆರಿದಿಟ್ಟದ್ದು ಏಕವ್ಯಕ್ತಿಯ ಪ್ರಥಮ ಅವತರಣಿಕೆ ಭಾಮಿನಿ. ಇದು ಸ್ತ್ರೀಯ ಚಿತ್ತವೃತ್ತಿ, ಚಾಂಚಲ್ಯವನ್ನೇ ಪ್ರಧಾನವಾಗಿಟ್ಟುಕೊಂಡು ಪ್ರದರ್ಶನಗೊಂಡ ರಂಗಕೃತಿ. ಬಳಿಕ ಕೃಷ್ಣಾರ್ಪಣ, ಯಕ್ಷದರ್ಪಣ, ಜಾನಕೀ ಜೀವನ, ಪ್ರಣಯ ವಂ‘ಚಿತೆ’ (ಅಂಬೆ), ಪೂತನಿ, ದಾಕ್ಷಾಯಿಣಿ, ಚಿತ್ರಾಂಗದಾ, ವಿಷಯೆ, ಪ್ರಭಾವತಿ, ಯಕ್ಷ ನವೋದಯ, ದಾಸ ದೀಪಾಂಜಲಿ, ವೇಣು ವಿಸರ್ಜನ ಏಕವ್ಯಕ್ತಿ ಪ್ರಯೋಗಗಳು ಬೆಳಗಿವೆ.

ಬಹಳ ಮುಖ್ಯವಾಗಿ ಮಂಟಪರೇ ತಿಳಿಸಿದಂತೆ, ಈ ಪ್ರಯೋಗಕ್ಕೆ ಇಳಿಯಲು ಹಿಂಜರಿದಿದ್ದರಂತೆ. ಅದಕ್ಕೆ ಕಾರಣ ವಯಸ್ಸು ನಲ್ವತ್ತು ದಾಟಿದ್ದು. ಕುಣಿಯುವುದು ಕಷ್ಟವೆಂಬ ಭಾವದಿಂದ. ಆದರೆ, ನೃತ್ತಾಭಿನಯಕ್ಕಿಂತ ನಾಟ್ಯಾಭಿನಯಕ್ಕೆ ಒತ್ತು ಕೊಟ್ಟು ಶುದ್ಧ ಸಾತ್ವಿಕ ಅಭಿನಯದೊಡನೆ ಸ್ತ್ರೀವೇಷದ ಪರಕಾಯ ಪ್ರವೇಶ ಮಾಡಬೇಕೆಂಬುದನ್ನು ತಿಳಿ ಹೇಳಿದ ಶತಾವಧಾನಿಗಳು ಶಾಸ್ತ್ರದ ಆಧಾರವನ್ನೂ ಒದಗಿಸಿದರು. ಅದಕ್ಕೊಪ್ಪಿದ ಮಂಟಪ, ಪದ್ಮಾ ಸುಬ್ರಹ್ಮಣ್ಯಂ ಶಿಷ್ಯೆ ಸುಂದರೀ ಸಂತಾನಂ ಅವರಿಂದ ನಾಟ್ಯಶಾಸ್ತ್ರದ ಚಾರಿ, ಮುದ್ರೆಗಳನ್ನು ಕಲಿತು ಯಕ್ಷಗಾನಕ್ಕೆ ತಂದರು. ವೇಷಭೂಷಣದಲ್ಲೂ ಆವರಣಕ್ಕೆ ಹೊಂದುವಂತೆ ಬದಲಾವಣೆ ಮಾಡಿಕೊಂಡರು. ಪರಿಣಾಮವಾಗಿ ಏಕವ್ಯಕ್ತಿ ಯಕ್ಷಗಾನ ಹೊಸದೊಂದು ದಾಖಲೆಯಾಯಿತು. ವಿದ್ವಜ್ಜನರು, ಸಂಗೀತ, ನಾಟ್ಯ, ಸಾಹಿತ್ಯ ಕ್ಷೇತ್ರದವರೂ ಆದರಿಸಿದರು. ಯಕ್ಷಗಾನೇತರ ವಲಯದ ಮನೆಯಂಗಳ, ಜಗುಲಿಯಲ್ಲೂ ಏಕವ್ಯಕ್ತಿ ಪ್ರದರ್ಶನಗಳಾಗಿವೆ. ಇಲ್ಲಿ ‘ನಡುಮನೆಯಲ್ಲಿ ಯಕ್ಷಗಾನ’ ಎನ್ನುವುದೂ ಹೊಸ ಆವಿಷ್ಕಾರ.

ಮಂಟಪರ ಏಕವ್ಯಕ್ತಿ ಪ್ರದರ್ಶನವನ್ನು ಒಂದು ಹಂತದಲ್ಲಿ ಮೂಕಿ ಯಕ್ಷಗಾನವೆಂದು ಮೂಗು ಮುರಿದವರೂ ಇದ್ದಾರೆ. ಮಾತಿನಲ್ಲಿ ಹೇಳುವುದನ್ನು ಅಭಿನಯದಲ್ಲೇ ಬಿಂಬಿಸುತ್ತಿದ್ದರಿಂದ ವಾಚಿಕಾಂಗವನ್ನು ಕಳಚಲಾಗಿತ್ತು. ಸಾಂಪ್ರದಾಯಿಕ ಪ್ರೇಕ್ಷಕರಿಗೆ ಇದು ಒಗ್ಗಿರಲಿಲ್ಲ. ನಂತರದ ಪ್ರಯೋಗಗಳಲ್ಲಿ ಔಚಿತ್ಯಕ್ಕನುಗುಣವಾಗಿ ತೀರ ಚುಟುಕಾಗಿ ಅರ್ಥಗಾರಿಕೆ ಸೇರಿಸಿಕೊಂಡಿದ್ದಿದೆ. ಅದೇನೇ ಇರಲಿ, ಪ್ರದರ್ಶನವನ್ನೇ ನೋಡದೇ ಆಡಿಕೊಂಡವರ, ಪೂರ್ವಗ್ರಹ ಪೀಡಿತರ ವ್ಯಂಗ್ಯ ನುಡಿಯ ಮಧ್ಯೆಯೂ ಮಂಟಪ ಪ್ರಭಾಕರ ಉಪಾಧ್ಯರ ಏಕವ್ಯಕ್ತಿ ಯಕ್ಷಗಾನ ಯಶಸ್ಸು ಗಳಿಸಿದ್ದೊಂದು ಅದ್ಭುತ. ಗಣೇಶ್ ಅವರ ನಿರ್ದೇಶನದಲ್ಲಿ ‘ವಿಜಯ ವಿಲಾಸ’ (ಕೊಂಡದಕುಳಿ-ಮಂಟಪ), ‘ಹಂಸ ಸಂದೇಶ’ (ಮಂಟಪ-ಸುಂದರೀ ಸಂತಾನಂ) ಯುಗಳ ಪ್ರಯೋಗಗಳೂ ಕ್ವಚಿತ್ತಾಗಿ ನಡೆದಿವೆ. ಕಲೆಯಿಂದ ಪ್ರತಿಫಲಾಪೇಕ್ಷೆ ಇಲ್ಲದೆ ನಡೆಸಿದ ಈ ಪ್ರಯತ್ನವು ಈ ತಲೆಮಾರಿನ ಒಂದು ಚಾರಿತ್ರಿಕ ಘಟ್ಟ ಎನ್ನಲು ಯಾವ ಮುಲಾಜೂ ಬೇಕಿಲ್ಲ.

‘ಜಾನಕೀ ಜೀವನ’ದಲ್ಲಿ ಚಿನ್ನದ ಜಿಂಕೆಯನ್ನು ಕಂಡು ಅದಕ್ಕಾಗಿ ಹಂಬಲಿಸುವ ಚಂಚಲ ಸ್ವಭಾವದ ಸೀತೆಯೇ ಬೇರೆ. ಅಗ್ನಿ ಪರೀಕ್ಷೆಗೆ ಒಳಗಾಗುವ ಪ್ರಭುದ್ಧ ನಾರಿ ಸೀತೆಯೇ ಬೇರೆ. ಇವೆರಡನ್ನೂ ಸಮರ್ಥವಾಗಿ ಅಭಿನಯಿಸಿ ತೋರಿಸಿದವರು ಮಂಟಪ. ಅವರ ವೇಷದಲ್ಲಿ ಗೋಪಿಕಾ ಸ್ತ್ರೀಯೊಂದಿಗೆ ಚೆಲುವ ಕೃಷ್ಣನೂ ಕಂಡಿದ್ದಾನೆ. ಮಂಟಪ ಯಕ್ಷಗಾನ ಕಲಿತಿದ್ದು ಉಡುಪಿ ಕೇಂದ್ರದಲ್ಲಿ. ಮೊದಲ ತಿರುಗಾಟವಾದದ್ದು ಕೆರೆಮನೆ ಮಹಾಬಲ ಹೆಗಡೆಯವರ ನಿರ್ದೇಶಕತ್ವದ ಕಮಲಶಿಲೆ ಮೇಳದಲ್ಲಿ. ಬಳಿಕ ಪೆರ್ಡೂರು (ಕಾಳಿಂಗ ನಾವುಡ), ಕೆರೆಮನೆ ಶಂಭು ಹೆಗಡೆಯವರ ಇಡಗುಂಜಿ ಮೇಳದಲ್ಲಿ ತಿರುಗಾಟ ಮಾಡಿದ್ದಾರೆ. ಮಹಾಬಲ ಹೆಗಡೆ, ಶಂಭು ಹೆಗಡೆ, ಚಿಟ್ಟಾಣಿ ಅವರಿಂದ ಹಿಡಿದು ಈಗಿನ ಯಾಜಿ, ಕೊಂಡದಕುಳಿ ಅವರಿಗೂ ನಾಯಕಿಯಾಗಿ ಪಾತ್ರ ಮಾಡಿದ್ದು ಮಂಟಪರ ಅಗ್ಗಳಿಕೆ.

ಸಾವಿರದಾಚೆಯ ನಿರೀಕ್ಷೆ
ಯಕ್ಷಗಾನದಲ್ಲಿ ಸ್ತ್ರೀವೇಷ ಮಾಡುವವರು ೪೦ - ೪೫ ವರ್ಷಕ್ಕೆ ತಾರಾಮೌಲ್ಯ ಕಳೆದುಕೊಳ್ಳುತ್ತಾರೆ. ಮಂಟಪರಿಗೆ ೫೦ ದಾಟಿದೆ. ಈಗಲೂ ಅವರು ವೇಷ ಕಟ್ಟಿ ನಿಂತರೆಅಂಗನಾಮಣಿ ನಿಲ್ಲು ನಿಲ್ಲೆಲೇ...’ ಎನ್ನುವಷ್ಟು ಚೆಂದ ಕಾಣುತ್ತಾರೆ. ಇದಕ್ಕೆ ಕಾರಣ ಅವರು ಅನುಸರಿಸುತ್ತಿರುವ ಆಹಾರ ಕ್ರಮ. ಉದ್ಯಮ - ಕಲೆಯ ನಡುವೆ ಶಿಸ್ತು ರೂಢಿಸಿಕೊಂಡಿದ್ದು. ಬೆಳಗ್ಗೆ ಕ್ಕೆ ಏಳುವ ಮಂಟಪರು ಯೋಗ, ಪ್ರಾಣಾಯಾಮ ತಪ್ಪಿಸುವುದಿಲ್ಲ. ಕಲಾಜೀವನ ಹಾಗೂ ಜೀವನ ಕಲೆಗಳೆರಡೂ ಅವರಿಗೆ ಸಿದ್ಧಿಸಿದೆ. ಹೀಗಾಗಿ ಅವರು ರಂಗಸ್ಥಳಕ್ಕೆ ಬಂದರೆ ಹೆಣ್ಣೇ ಆಗುತ್ತಾರೆ. ಇನ್ನೂ ವೇಷ ಮಾಡುವ ಉತ್ಸಾಹ, ಶ್ರದ್ಧೆ ಅವರಲ್ಲುಂಟು. ಶಿಷ್ಟ ಸೊಬಗಿನ ಯಕ್ಷ ತಂಡಗಳಿಗೆ ಮಂಟಪರ ಮಾರ್ಗದರ್ಶನ, ವೇಷದ ಸಹಕಾರದ ಅಗತ್ಯವೂ ಇದೆ. ಮುಂದಿನವರಿಗೆ ಅಗ್ರಪಂಕ್ತಿ ಹಾಕಿ ಕೊಡಲು ಮಂಟಪ ಮತ್ತೊಮ್ಮೆ ವೃತ್ತಿ ಕೂಟಗಳೊಳಗೆ ಅತಿಥಿಯಾಗಿ ಬಂದಾರು. ಶತಾವಧಾನಿಗಳು ಬೇರೆಯದೇ ಆದ ಇನ್ನೊಂದುಮಂಟಪಕಟ್ಟುವುದಕ್ಕೂ ಮಾರ್ಗ ತೋರಿಯಾರು. ಸಾವಿರದಾಚೆಯ ನಿರೀಕ್ಷೆಗೆ ಯಕ್ಷರಂಗ ಕಾತರಿಸುತ್ತಿದೆ.

ಒಮ್ಮೆ ರುಚಿ ನೋಡಿದರೆ ಬಿಡಲಾರರು
ಹ್ವಾಯ್ ನಾನ್ ಮಂಟಪ. ನಿಮ್ಗೆ ಗಟ್ಟಿ ಒಂದು ಗಂಟೆ ಪುರುಸೊತ್ತು ಇದ್ದರೆ ಬನ್ನಿ. ಪೂರ್ತಿ ಪ್ರದರ್ಶನ ಕಾಣಿ. ಮಧ್ಯೆ ಎದ್ದು ಹೋಪ್ದಾದ್ರೆ ಬಪ್ದೇ ಬೇಡ...
ಇದು ಟಿಪಿಕಲ್ ಮಂಟಪ ಸ್ಟೈಲ್. ಆಸಕ್ತರನ್ನು ತಮ್ಮ ಪ್ರದರ್ಶನಗಳಿಗೆ ಮಂಟಪ ಆಹ್ವಾನಿಸುವುದೇ ಪರಿಯಲ್ಲಿ. ಅವರ ಮಾತುಗಳಲ್ಲಿ ಕುಂದಾಪುರ ಭಾಷೆಯ ಸೊಗಡು ದಟ್ಟವಾಗಿಯೇ ಇದೆ. ಅವರ ಕರೆಗೆ ಓಗೊಟ್ಟು ಒಮ್ಮೆ ಪ್ರದರ್ಶನ ನೋಡಿದವರು ಮಂಟಪ ಐಸ್ಕ್ರೀಮ್ ರುಚಿ ಕಾಣಿಸಿಕೊಂಡವರಂತೆ ಮತ್ತೆ ಹುಡುಕಿಕೊಂಡು ಹೋಗುತ್ತಾರೆ. ಮಂಟಪರ ಏಕವ್ಯಕ್ತಿ ತಂಡದ ಶಿಸ್ತು, ಅಚ್ಚುಕಟ್ಟುತನವೂ ಮಾದರಿ.
ಮಂಟಪರ ೯೦೦ ನೇ ಏಕವ್ಯಕ್ತಿ ಪ್ರದರ್ಶನವುವಿಜಯ ಕರ್ನಾಟಕ ಬೆಂಗಳೂರಿನ ಕಚೇರಿಯಲ್ಲೇ ಆಗಿತ್ತು. ಮಂಟಪರ ಮನೆ ಯಾವಾಗಲೂ ಅತಿಥಿಗಳಿಂದ ಕೂಡಿರುತ್ತದೆ. ಅಲ್ಲಿನ ಸತ್ಕಾರ ಮಾತ್ರ ಮಂಟಪರ ಸಹಧರ್ಮಿಣಿ ಮಂಗಲಕ್ಕ ಅವರದ್ದು. ಎಲ್ಲರಿಗೂ ಮಂಗಲಕ್ಕನಾಗಿರುವ ಮಂಗಲಾ ಉಪಾಧ್ಯ, ಮಂಟಪರ ಎಲ್ಲ ಏಳಿಗೆಯ ಪ್ರೇರಕ ಶಕ್ತಿ. ಮಂಟಪ ಗೃಹದಲ್ಲಿ ತಿಂಗಳಿಗೊಂದು ಸಾಂಸ್ಕೃತಿಕ ಕಾರ್ಯಕ್ರಮವೂ ಕಾಯಂ ನಡೆಯುತ್ತದೆ.

ಅನಿವಾರ್ಯವಲ್ಲ
ಏಕವ್ಯಕ್ತಿ ಪ್ರಯೋಗ ಯಕ್ಷಗಾನಕ್ಕೆ ಅನಿವಾರ್ಯವಲ್ಲ. ಹತ್ತಾರು ಕಲಾವಿದರಿದ್ದು ಕೊಡುವ ಪ್ರದರ್ಶನದಲ್ಲೇ ಯಕ್ಷಗಾನದ ನಿಜವಾದ ಸೌಂದರ್ಯ ಅಡಗಿರುತ್ತದೆ. ಆದರೆ, ಏಕವ್ಯಕ್ತಿಯ ತತ್ವವನ್ನು ಕೂಟ ಪ್ರದರ್ಶನದಲ್ಲಿ ಅಳವಡಿಸಿಕೊಂಡರೆ ಒಳ್ಳೆಯದಾಗುತ್ತದೆ ಎಂದು ಮಂಟಪ ಹೇಳುತ್ತಾರೆ. ಏಕವ್ಯಕ್ತಿ ಯಕ್ಷಗಾನಕ್ಕೆ ಅಣಿಯಾದಾಗ ಶತಾವಧಾನಿಗಳು ನನ್ನ ಅಹಂಕಾರವನ್ನು ಬಡಿದರು. ಸ್ವಾತಂತ್ರ್ಯವನ್ನು ಉತ್ತೇಜಿಸಿದರು. ಇದೆಲ್ಲದರ ಫಲಸ್ವರೂಪವೇ ಸಾವಿರದ ಪ್ರಯೋಗ. ಯಕ್ಷಗಾನದ ಒಟ್ಟಾರೆ ಸುಧಾರಣೆ ದೃಷ್ಟಿಯಿಂದಲೂ ಇಂಥದೊಂದು ಮನೋಧರ್ಮ ಬೇಕು. ಶತಾವಧಾನಿಗಳಂತಹ ವಿದ್ವಾಂಸರಿಗೆ ಅರ್ಪಿಸಿಕೊಂಡು ಮೌಲ್ಯ ನಿಷ್ಕರ್ಶೆಗೊಳಪಡುವ ತೆರೆದುಕೊಳ್ಳುವಿಕೆ ಅಗತ್ಯವೆಂಬುದು ಮಂಟಪರ ಅನುಭವದ ಹಿನ್ನೆಲೆಯ ನುಡಿ.

ಏಪ್ರಿಲ್ ರಂದು ಸಾವಿರದ ಸಂಭ್ರಮ
ಡಾ. ಮೋಹನ ಆಳ್ವ ನೇತೃತ್ವದಲ್ಲಿ ಏಪ್ರಿಲ್ ರಂದು ಶುಕ್ರವಾರ ಮೂಡಬಿದ್ರೆಯ ವಿದ್ಯಾಗಿರಿಯಲ್ಲಿ ಮಂಟಪ ಪ್ರಭಾಕರ ಉಪಾಧ್ಯರ ಏಕವ್ಯಕ್ತಿ ಯಕ್ಷಗಾನದಸಾವಿರದ ಸಂಭ್ರಮಕಾರ್ಯಕ್ರಮ ನಡೆಯಲಿದೆ. ‘ಅನನ್ಯ ವ್ಯಕ್ತಿಕೃತಿ ಬಿಡುಗಡೆ ಆಗಲಿದೆ. ಅಂದು ಬೆಳಗ್ಗೆ ೧೦ ರಿಂದ ರಾತ್ರಿ ವರೆಗೆ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳೂ ಇವೆ. ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಮುಖ್ಯಮಂತ್ರಿ ಯಡಿಯೂರಪ್ಪ, ಡಾ. ಸದಾನಂದ ಮಯ್ಯ ಸೇರಿದಂತೆ ಗಣ್ಯರು ಪಾಲ್ಗೊಳ್ಳುತ್ತಾರೆ.
(೩೧-೦೩-೨೦೧೦ ರಂದು ಬುಧವಾರ ‘ವಿಜಯ ಕರ್ನಾಟಕ’ ಲವಲವಿಕೆಯಲ್ಲಿ ಈ ಲೇಖನ ಪ್ರಕಟವಾಗಿದೆ.)

ಯಕ್ಷಗಾನದ ಮಾದರಿ ಡಿವಿಡಿ ‘ಇಡಗುಂಜಿಯಲ್ಲಿ ಶ್ರೀರಾಮ ನಿಜ ನಿರ್ಯಾಣ’ ಇನ್ನೂ ಇವೆ, ದರ್ಶನ ಯಾವಾಗ ?


ಯಕ್ಷಗಾನಕ್ಕೆ ಅವರೇ ಮಾದರಿ. ಅವರೇನೇ ಮಾಡಿದರೂ ಅಲ್ಲೊಂದು ಶಿಸ್ತು, ಸೊಬಗು ಇರುತ್ತದೆ ಎಂಬ ಮಾತು ಕೆರೆಮನೆಯವರ ಬಗ್ಗೆ ಆಗಾಗ ಕೇಳಿ ಬರುತ್ತದೆ. ಡಿವಿಡಿ ತಯಾರಿಕೆ ವಿಚಾರದಲ್ಲೂ ಇದು ನಿಜವಾಗಿದೆ.

ಇಡಗುಂಜಿಯ ಆರಾಧ್ಯ ದೇವ ಶ್ರೀಮಹಾಗಣಪತಿ ಸನ್ನಿಧಾನದಲ್ಲಿ (ತೇರಿನ ದಿನ) ‘ಸೀತಾ ವಿಯೋಗ’ದ ರಾಮನ ಪಾತ್ರ ಮಾಡಿದ್ದ ಶಂಭು ಹೆಗಡೆಯವರು ಅಲ್ಲಿಯೇ ಕೊನೆಯುಸಿರೆಳೆದಿದ್ದು ಗೊತ್ತಿದೆ. ಆ ಆಟದ ಡಿವಿಡಿಯನ್ನು ಅವರ ಮಗ ಶಿವಾನಂದ ಹೆಗಡೆ ಹೊರ ತಂದಿದ್ದಾರೆ. ಅದು ಇತ್ತೀಚೆಗೆ ಗುಣವಂತೆಯಲ್ಲಿ ನಡೆದ ಕೆರೆಮನೆ ಮೇಳದ ಅಮೃತ ಮಹೋತ್ಸವದಲ್ಲಿ ಬಿಡುಗಡೆ ಆಗಿದೆ. ‘ಇಡಗುಂಜಿಯಲ್ಲಿ ಶ್ರೀರಾಮ ನಿಜ ನಿರ್ಯಾಣ’ ಹೆಸರಿನಲ್ಲಿ ಈ ಡಿವಿಡಿ ಸಿದ್ಧಗೊಂಡಿದೆ.

ಯಕ್ಷಗಾನದ ಅದೆಷ್ಟೋ ಸಿ.ಡಿ/ ಡಿವಿಡಿಗಳು ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿವೆ. ಅವೆಲ್ಲವುಕ್ಕಿಂತ ಭಿನ್ನ ಎಂಬುದೇ ಈ ಡಿವಿಡಿಯ ವಿಶೇಷತೆ. ಡಾಕ್ಯುಮೆಂಟರಿ ಮಾಡುವುದರಲ್ಲಿ ಕೆರೆಮನೆಯವರು ಎತ್ತಿದ ಕೈ. ಅದಕ್ಕೆ ಕಾರಣ ಅವರ ಒಡನಾಟ, ಅನುಭವ. ಡಾ. ಶಿವರಾಮ ಕಾರಂತರಂತೆ ವಿಶಾಲ ನೆಲೆಯಲ್ಲಿ ಚಿಂತನೆ ಮಾಡಿದವರು ಕೆರೆಮನೆಯವರು. ಸ್ವತಃ ಕಲಾವಿದರಾಗಿ ಯಕ್ಷಗಾನವನ್ನು ತಳಸ್ಪರ್ಷಿಯಾಗಿ ಮೈಗೂಡಿಸಿಕೊಂಡು ಅದನ್ನು ದೇಶದ ಇತರ ಕಲಾ ಪ್ರಕಾರಗಳೊಂದಿಗೆ ಅಳೆದು ನೋಡಿದವರು ಕೆರೆಮನೆ ಬಂಧುಗಳು. ಅವರು ‍ಯಾರದೋ ಒತ್ತಡ, ಭಿಡೆಯಕ್ಕೆ ಮಣಿಯುವವರೂ ಅಲ್ಲ. ಹಾಗಾಗಿ ಅವರ ಯಾವ ಪ್ರಸಂಗಗಳ ‘ಬೆಳ್ಳಿತಟ್ಟೆ’ಗಳೂ (ಸಿ.ಡಿ) ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಅಚ್ಚುಕಟ್ಟುತನ, ವೃತ್ತಿಪರತೆಯಿಲ್ಲದ ಡಿವಿಡಿಗಳು ಬೇಡ ಎಂಬುದೇ ಶಂಭು ಹೆಗಡೆಯವರ ನಿಲುವಾಗಿತ್ತು.

ಸೈದ್ಧಾಂತಿಕವಾಗಿ ಈ ವಾದ ಒಪ್ಪುವಂಥದ್ದು. ಆದರೆ ಮಹಾಬಲ ಹೆಗಡೆ, ಶಂಭು ಹೆಗಡೆ ಜೋಡಿಯ ಸಿ.ಡಿಗಳು ಇಲ್ಲದಿರುವುದು ಐತಿಹಾಸಿಕ ಪ್ರಮಾದ. ಸಿ.ಡಿ ಯುಗ ಆರಂಭಗೊಂಡಾಗ ಮಹಾಬಲ - ಶಂಭು ಹೆಗಡೆ ಇನ್ನೂ ವೇಷ ಮಾಡುತ್ತಿದ್ದರು. ಮನಸ್ಸು ಮಾಡಿದ್ದರೆ ಅಂದಿನ ಪ್ರದರ್ಶನಗಳನ್ನು ಸರಿಯಾಗಿ ವೀಡಿಯೊ ಮಾಡಿ ದಾಖಲಿಸಬಹುದಿತ್ತು. ಆ ಕೆಲಸ ಆಗಲೇ ಇಲ್ಲ. ಮಾದರಿಯಾಗಿ ಉಳಿಸುವುದಕ್ಕಾದರೂ ಸ್ಟುಡಿಯೋದಲ್ಲಿಯೇ ಇದಕ್ಕಾಗಿ ಶೂಟಿಂಗ್ ಮಾಡಬಹುದಿತ್ತು. ಅದೂ ಕೈಗೂಡಿಲ್ಲ. ಈ ಮೇರು ಕಲಾವಿದರನ್ನು ಒಡಂಬಡಿಸುವ ಯತ್ನ ಸಫಲವಾಗಲಿಲ್ಲವೆಂದು ಕಾಣುತ್ತದೆ.

ಈ ಕೊರತೆಯನ್ನು ಗುಲಗಂಜಿಯಷ್ಟು ನೀಗಿಸುವ ರೀತಿಯಲ್ಲಿ ಇರುವುದು ಸೀತಾ ವಿಯೋಗದ ಡಿವಿಡಿ. ಇದರಲ್ಲಿ ಮಹಾಬಲ ಹೆಗಡೆ ಇಲ್ಲ. ಶಂಭು ಹೆಗಡೆಯವರ ಕಡೆಯ ವೇಷವೆಂಬ ದೃಷ್ಟಿಯಿಂದ ಮಹತ್ವ. ಮುಖ್ಯವಾಗಿ ಇದು ಡಿವಿಡಿ ಉದ್ದೇಶಕ್ಕೆ ಚಿತ್ರೀಕರಣಗೊಂಡದ್ದಲ್ಲ. ಆದರೆ ಆಡಿಯೊ, ವೀಡಿಯೊ ಗುಣಾತ್ಮಕವಾಗಿದೆ.
ಉತ್ತಮ ಡಾಕ್ಯುಮೆಂಟರಿ
ಡಾಕ್ಯುಮೆಂಟರಿ ರೂಪದಲ್ಲಿಯೇ ಶಿವಾನಂದ ಹೆಗಡೆ ಇದನ್ನು ಸಿದ್ಧ ಪಡಿಸಿದ್ದಾರೆ. ಡಿವಿಡಿಯ ಕವರ್ ಪೇಜ್ ಕಲಾತ್ಮಕವಾಗಿದೆ. ಇದರ ರಚನೆ ಅಪಾರ ಅವರದ್ದು. ‘ಭೀಮಸೇನ ಜೋಷಿ, ಗಂಗೂಬಾಯಿ ಹಾನಗಲ್, ಮಲ್ಲಿಕಾರ್ಜುನ ಮನ್ಸೂರರಂತೆಯೇ ಶಂಭು ಹೆಗಡೆ ಕೂಡ ಕನ್ನಡದ ಒಬ್ಬ ಶ್ರೇಷ್ಠ ಕಲಾವಿದ’ ಎಂಬ ಡಾ.ಯು.ಆರ್. ಅನಂತಮೂರ್ತಿಯವರ ನುಡಿ ಅಚ್ಚಾಗಿರುವುದು ಇದರ ಘನತೆ ಹೆಚ್ಚಿಸಿದೆ. ಕ್ಲಾಸಿಕಲ್ ಕ್ಷೇತ್ರದ ಡಿವಿಡಿ ದೊರೆಯುವ ಪ್ರತಿಷ್ಠಿತ ಮಳಿಗೆಗಳಲ್ಲಿ ಇದನ್ನಿಟ್ಟರೆ ಕಣ್ಸೆಳೆಯುವಷ್ಟು, ಎತ್ತಿಕೊಳ್ಳುವಷ್ಟು ಆಕರ್ಷಣೀಯವಾಗಿದೆ.

ಆರಂಭದಲ್ಲಿ ಶಂಭು ಹೆಗಡೆಯವರ ಕೋರಿಯೋಗ್ರಫಿ ಗುರು ಡಾ. ಮಾಯಾರಾವ್ ಮಾತಾಡಿದ್ದಾರೆ. ನಂತರ ಡಾ. ಅನಂತಮೂರ್ತಿ ಅವರದ್ದು. ಅನಂತಮೂರ್ತಿಗಳು ಯಕ್ಷಗಾನವನ್ನು ನೋಡುವ ದೃಷ್ಟಿಕೋನವು ನಮಗೊಂದು ಬಗೆಯ ಹೊಸ ಹೊಳಹು ಕೊಡುತ್ತದೆ. ಬಳಿಕ ಶಂಭು ಹೆಗಡೆಯವರನ್ನು ಹತ್ತಿರದಿಂದ ಕಂಡಿರುವ ಯಕ್ಷಗಾನದವರೇ ಆದ ಡಾ.ಎಂ. ಪ್ರಭಾಕರ ಜೋಶಿ, ಶಂಭು ಹೆಗಡೆ ಒಬ್ಬ ಕಲಾವಿದ-ಸಂಘಟಕ-ಚಿಂತಕರಾಗಿ ಎಷ್ಟು ಎತ್ತರದಲ್ಲಿದ್ದರು ಎಂಬುದನ್ನು ವಿವರಿಸಿದ್ದಾರೆ. ಮಾತಿನ ಬರದಲ್ಲಿ ‘ಮೊದಲು ಸಾಲಿಗ್ರಾಮ ಮೇಳದಲ್ಲಿ ಕೆಲ ಪದ್ಯದ ಸಾಲ್ವನ ವೇಷ ಹಾಕಿದ್ದ ಶಂಭು ಹೆಗಡೆ, ಇಡಗುಂಜಿಯಲ್ಲಿ ಶ್ರೀರಾಮ ನಿರ್ಯಾಣದ ರಾಮನ ಪಾತ್ರ ಮಾಡುವಷ್ಟು...’ ಎಂಬಂತೆ ಹೇಳಿ ಬಿಟ್ಟಿದ್ದಾರೆ. ಕೊನೆಯ ಪ್ರದರ್ಶನದಲ್ಲಿ ಶಂಭು ಹೆಗಡೆಯವರು ಮಾಡಿದ್ದು ಸೀತಾ ವಿಯೋಗದ (ಲವಕುಶ) ರಾಮನ ಪಾತ್ರ. ನಿರ್ಯಾಣದ್ದಲ್ಲ. ಇದೊಂದು ವಾಕ್ಯ ಕಟಾವಾಗದೇ (ಎಡಿಟ್) ಉಳಿದುಕೊಂಡಿದೆ.

ಇದಾದ ಮೇಲೆ ಸೀತಾ ವಿಯೋಗದ ಪ್ರದರ್ಶನವನ್ನು ಡಿವಿಡಿಗೆ ಅಳವಡಿಸಲಾಗಿದೆ. ಶತ್ರುಘ್ನನ (ಶಿವಾನಂದ ಹೆಗಡೆ) ಸನ್ನಿವೇಶ ಜಾಸ್ತಿ ಇಲ್ಲ. ಶಂಭು ಹೆಗಡೆಯವರಿಗೆ ನುಡಿನಮನ ಎಂಬ ದೃಷ್ಟಿಯಿಂದ ಹೀಗೆ ಮಾಡಲಾಗಿದೆ. ರಾಮನ ಪಾತ್ರ ತೋರಿಸಲು ಒತ್ತು ಕೊಡಲಾಗಿದೆ. ‘ಏಳಿ ಪೋಗುವ ನಾವು ಮುನಿಪನಿದ್ದೆಡೆಗೆ...’ ಪದ್ಯದ ವರೆಗೆ. ನಮಗೆಲ್ಲ ತಿಳಿದಿರುವ ಹಾಗೆ ನೆಬ್ಬೂರು ಭಾಗವತರದ್ದೇ ಹಿಮ್ಮೇಳ. ಈ ಡಿವಿಡಿ ಯಕ್ಷಗಾನಾಸಕ್ತರ ಸಂಗ್ರಹದಲ್ಲಿ ಇರಲೇಬೇಕಾದುದು. ಮನಸ್ಸಿಗೆ ಬಂದಂತೆ ಸಿ.ಡಿ ಮಾಡುವವರೂ ಇದನ್ನೊಮ್ಮೆ ಸಂಯಮದಿಂದ ನೋಡುವುದು ಒಳಿತು. ಸದ್ಯ ಉತ್ತುಂಗದಲ್ಲಿರುವ, ಭರವಸೆ ಹುಟ್ಟಿಸಿರುವ ಕಲಾವಿದರೂ ಇದರಿಂದ ಕಲಿತುಕೊಳ್ಳಬೇಕಾದುದು ಬಹಳ ಇದೆ. ಅಂಥವರ ಕೈಕಾಲು ಗಟ್ಟಿ ಇರುವಾಗಲೇ ಇಂಥಹುದೊಂದು ದಾಖಲೆ ಮಾಡಿಕೊಳ್ಳುವುದಕ್ಕೆ ಯೋಚಿಸಿದರೆ ಶಾಶ್ವತವಾಗಿ ಉಳಿಯುತ್ತದೆ. ಮುಖ್ಯವಾಗಿ ಯಕ್ಷಗಾನದ ಪ್ರೋತ್ಸಾಹಕರು, ಕಲಾತ್ಮಕ ಧೊರಣೆ ಇರುವವರು ಈ ಬಗ್ಗೆ ಆಲೋಚನೆ ಮಾಡಬೇಕು.
ಕಪಾಟಿನಲ್ಲಿದ್ದರೇನು ಪ್ರಯೋಜನ ?
ಇನ್ನೊಂದು ಮಹತ್ವದ ಸಂಗತಿಯೆಂದರೆ, ಕೆರೆಮನೆಯವರ ಶ್ರೇಷ್ಠ ಕೃತಿಗಳ ಡಿವಿಡಿಗಳು (ಕಲಾತ್ಮಕವಾದವು) ಇಲ್ಲವೆನ್ನುವುದು ನಿಜ. ಆದರೆ ಮಹಾಬಲ ಹೆಗಡೆಯವರನ್ನೂ ಒಳಗೊಂಡಂತೆ ಇಡಗುಂಜಿ ಮೇಳದ ಸುವರ್ಣ ಯುಗದ ನೇರ ಪ್ರದರ್ಶನಗಳು (ಲೈವ್ ಶೋ) ಬಹುತೇಕ ಚಿತ್ರೀಕರಣಗೊಂಡಿವೆ. ಶಿವಾನಂ ಹೆಗಡೆ ಖುದ್ದು ಅದನ್ನು ಮಾಡಿಸಿ ಜೋಪಾನವಾಗಿಟ್ಟಿದ್ದಾರೆ ಎಂಬ ಸುದ್ದಿ ಪ್ರಚಲಿತದಲ್ಲಿದೆ. ಅದು ಸತ್ಯವೆಂಬ ವಿಶ್ವಾಸ ನನ್ನದ್ದೂ ಕೂಡ. ಅದನ್ನೆಲ್ಲ ಶಿವಾನಂದ ಹೀಗೆ ಡಿವಿಡಿ ರೂಪಕ್ಕೆ ಇಳಿಸುತ್ತಾರೋ ಇಲ್ಲವೋ ಗೊತ್ತಿಲ್ಲ.
ಆದರೆ ಅವೆಲ್ಲ ಕೆರೆಮನೆ ಮೇಳದ ಸ್ವತ್ತಾಗಿ ಕಪಾಟಿನಲ್ಲೇ ಇದ್ದರೆ ಏನು ಪ್ರಯೋಜನ ? ಹಾಗಾದರೆ ಮುಂದಿನ ತಲೆಮಾರು ಒತ್ತಟ್ಟಿಗಿರಲಿ, ಈಗಿನವರಿಗೂ ‘ಕೆರೆಮನೆ ಘರಾಣೆ’ ಬೆಳೆದು ಬಂದ ವೈಭವದ ಪರಿಯನ್ನು ಕಾಣುವ ಅವಕಾಶ ತಪ್ಪಿ ಹೋಗುತ್ತದೆ. ಹಾಗೆ ಮಾಡಿದರೆ ಶಿವಾನಂದ ಹೆಗಡೆ ಅದಕ್ಕೆ ನೇರ ಹೊಣೆಯಾಗುತ್ತಾರೆ. ಯಾಕೆಂದರೆ ಈಗ ಉತ್ತರ ಕೊಡುವ ಜವಾಬ್ದಾರಿ ಸ್ಥಾನದಲ್ಲಿ ಇರುವವರು ಅವರು. ಪ್ರಶ್ನಿಸುವ ಸ್ವಾತಂತ್ರ್ಯ ನಮಗೆ ಧಾರಾಳವಾಗಿ ಇದೆ.

ನಾವೆಲ್ಲ ಶಿವಾನಂದ ಹೆಗಡೆ ಅವರಲ್ಲಿ ಇದೆಯೆಂದು ಭಾವಿಸಿರುವ ಕೆರೆಮನೆಯವರ ಯಕ್ಷಗಾನಗಳ ವೀಡಿಯೊ ಪ್ರತಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬೇಕೆಂದು ನಾನು ಸಲಹೆ ಕೊಡುವುದಿಲ್ಲ. ಕಡೇ ಪಕ್ಷ ಅವನ್ನೆಲ್ಲ ಡಾಕ್ಯುಮೆಂಟರಿ ರೂಪದಲ್ಲಿಯೇ ಗುಣವಂತೆ ಕಲಾಕೇಂದ್ರದಲ್ಲಿಯೇ ಹಾಕಿ ತೋರಿಸಲಿ. ಪ್ರತಿ ವರ್ಷ ಇದಕ್ಕಾಗಿ ವಿಶೇಷ ದಿನಗಳನ್ನು ನಿಕ್ಕಿ ಮಾಡಲಿ. ಇದರಿಂದ ಅಭಿಮಾನಿಗಳು, ಕಲಾವಿದರು, ಕ್ಷೇತ್ರಕ್ಕೆ ಬರಲಿರುವ ಹೊಸ ಪ್ರತಿಭೆಗಳಿಗೂ ಅನುಕೂಲವಾಗುತ್ತದೆ. ಅಧ್ಯಯನಾಸಕ್ತರಿಗೂ ಅನುವು ಮಾಡಿ ಕೊಡಬೇಕು. ಇಲ್ಲದಿದ್ದರೆ ಯಕ್ಷಲೋಕ ಬೆರಗಾಗುವಂತೆ ಇಡಗುಂಜಿ ಮೇಳದ ಅಮೃತ ಮಹೋತ್ಸವ ಸಂಘಟಿಸಿದ ಶಿವಾನಂದ ಹೆಗಡೆಯವರನ್ನು ತನ್ನಲ್ಲಿರುವುದನ್ನು ಯಾರಿಗೂ ಹೇಳದ, ಯಾರಿಗೂ ಕೊಡಲೂಬಾರದು ಎಂಬ ನಂಬಿಕೆಯ ‘ಗಿಡಮೂಲಿಕೆ ವೈದ್ಯ’ನಂತೆ ನೋಡಬೇಕಾದ ಸಂದರ್ಭ ಬಂದೀತು.
(‘ಇಡಗುಂಜಿಯಲ್ಲಿ ಶ್ರೀರಾಮ ನಿಜ ನಿರ್ಯಾಣಡಿವಿಡಿ ಬೇಕಾದವರು ಶಿವಾನಂದ ಹೆಗಡೆ ಅವರನ್ನು ಸಂಪರ್ಕಿಸಿ : ೯೪೪೮೧೮೯೧೪೦ ಫೋಟೊ ಕೃಪೆ - ಜೀಕೆ ಹೆಗಡೆ)

Last Posts